ರಾಯಚೂರು: ಹೊಸ ವರ್ಷದ ಮೊದಲ ದಿನವೇ ಗುರುವಾರ ಬಂದಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ.
ಗುರುರಾಘವೇಂದ್ರ ಸ್ವಾಮಿಗಳ ವಾರದ ದಿನವೇ ವರ್ಷದ ಆರಂಭವಾಗಿರುವುದರಿಂದ, ಪ್ರತಿವರ್ಷಕ್ಕಿಂತಲೂ ಎರಡುಪಟ್ಟು ಹೆಚ್ಚು ಭಕ್ತರು ರಾಯರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದಲೇ ವೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಠದ ಎಲ್ಲಾ ಪ್ರವೇಶ ದ್ವಾರಗಳನ್ನು ತೆರೆಯಲಾಗಿದೆ.
ಲಕ್ಷಾಂತರ ಭಕ್ತರು ಹೊಸ ವರ್ಷದಲ್ಲಿ ಸುಖ, ಶಾಂತಿ, ಸಮೃದ್ಧಿ ದೊರಕಲಿ ಎಂಬ ನಂಬಿಕೆಯಲ್ಲಿ ರಾಯರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದೇಶ-ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿರುವುದರಿಂದ ಮಂತ್ರಾಲಯ ತುಂಬಿ ತುಳುಕುತ್ತಿದೆ.
ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಮಠದ ವಸತಿ ಕೊಠಡಿ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆ ಕಂಡುಬಂದಿದೆ. ರಾಯರ ಅನುಗ್ರಹದಿಂದ ಇಡೀ ವರ್ಷ ಒಳಿತಾಗುತ್ತದೆ ಎಂಬ ಭಕ್ತರ ನಂಬಿಕೆಯೇ ಈ ಅಪಾರ ಜನಸಾಗರಕ್ಕೆ ಕಾರಣವಾಗಿದೆ.



