ಬೆಂಗಳೂರು: ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಆಪ್ತನ ಗನ್ ಮ್ಯಾನ್ ನಡೆಸಿದ ಗುಂಡಿನ ದಾಳಿಯ ಕುರಿತು ಸ್ಪೋಟಕ ಮಾಹಿತಿಯನ್ನು ಬಹಿರಂಗ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಗುಂಡಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನುಬಾಹಿರವಾಗಿ ಎರಡು ಬಾರಿ ನಡೆಸಲಾಗಿದೆ ಎಂದಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಕಾರ್ಯಕರ್ತ ರಾಜಶೇಖರ್ ಹತ್ಯೆ ಒಂದೆಡೆ, ಆದರೆ ಸ್ವಪಕ್ಷದ ಕಾರ್ಯಕರ್ತನ ಕೊಲೆಯನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಇದು ನಾಚುಗೇಡು. ಅದಕ್ಕಾಗಿ ಆ ನತದೃಷ್ಟ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆಗೆ ಒಳಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಏನು ಫಲಿತಾಂಶ ಹೊರಬಂತು? ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ಏನು ಮಾಹಿತಿ ಇದೆ? ಎಂಬುದನ್ನು ಸರಕಾರ ಹೇಳಬೇಕು. ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜಶೇಖರ ಅವರ ದೇಹವನ್ನು ಎರಡು ಸಲ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.
2ನೇ ಬಾರಿ ಪೋಸ್ಟ್ ಮಾರ್ಟಮ್ ಯಾಕೆ ಮಾಡಿದಿರಿ? 2ನೇ ಬಾರಿ ಪೋಸ್ಟ್ ಮಾರ್ಟಮ್ ಮಾಡಲಿಕ್ಕೆ ಯಾರು ಒತ್ತಡ ಹೇರಿದರು? ಮತ್ತೊಂದು ಬಾರಿ ಪರೀಕ್ಷೆಗೆ ಯಾರು ಆದೇಶ ಮಾಡಿದರು? ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ತಮಗೆ ಅನುಕೂಲಕರ ವರದಿ ಬರಲಿಲ್ಲ ಎಂದು ಅಲ್ಲಿಗೆ ‘ಸೂರ್ಯನ ಬೆಳಕು’ ಏನಾದರೂ ಬಿದ್ದಿತ್ತಾ? ಎಂದು ಸಚಿವ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ನೀವು ಸತ್ಯವಂತರಲ್ಲವೇ? ದಿನನಿತ್ಯ ಜಾಹೀರಾತುಗಳಲ್ಲಿ ‘ಸತ್ಯಮೆಯ ಜಯತೇ’ ಎಂದು ಕೊಚ್ಚಿಕೊಳ್ಳುತ್ತೀರಿ. ಈಗ ಸತ್ಯ ಹೇಳಿ. ರಾಜ್ಯದ ಜನತೆಗೆ ಸತ್ಯ ಏನೆಂದು ತಿಳಿಸಬೇಕಲ್ಲವೇ? ಎರಡನೇ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ ಎಂಬುದನ್ನು ಹೇಳಿ? ಮುಖ್ಯಮಂತ್ರಿಗಳೇ ಜನತೆಗೆ ಸತ್ಯವನ್ನು ಹೇಳಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ದೇಹದಲ್ಲಿ ಸಣ್ಣಪುಟ್ಟ ಚೂರು ಪತ್ತೆಯಾಯಿತು ಎಂಬ ಮಾಹಿತಿ ಇದೆ. ಎರಡನೇ ಶವ ಪರೀಕ್ಷೆಯನ್ನು ಮಾಡಿಸುವ ಮೂಲಕ ಸ್ವತಃ ಜನಾರ್ದನ ರೆಡ್ಡಿ ಅವರೇ ಗುಂಡು ಹೊಡೆದಿದ್ದು ಆರೋಪ ಮಾಡಿ ಕಥೆ ಅವರನ್ನು ಫಿಕ್ಸ್ ಮಾಡಲು ಷಡ್ಯಂತ್ರ್ಯ ಮಾಡಿದ್ದಾರೆ. ಆದರೆ, ಎರಡನೇ ಮರಣೋತ್ತರ ಪರೀಕ್ಷೆ ಈ ಸರಕಾರಕ್ಕೆ, ಸೂರ್ಯನ ಬೆಳಕು ಬೀಳಿಸಲು ಹೋದವರಿಗೆ ಉಲ್ಟಾ ಹೊಡೆದಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಸರಕಾರದ ತನಿಖೆ ನಿರುಪಯುಕ್ತ:
ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಹೀಗೆ ಹೀಗೆ ಆಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಮ್ಮ ಪಕ್ಷ ಶಾಸಕ ಭರತ್ ರೆಡ್ಡಿ ಪರ ನಿಲ್ಲುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳುತ್ತಾರೆ. ಸತೀಶ್ರೆಡ್ಡಿ ಗನ್ ಮ್ಯಾನ್ ಗನ್ನಿಂದ ಫೈಯರ್ ಆಗಿದೆ ಅಂತ ಸ್ವತಃ ಸಿಎಂ ಅವರೇ ಹೇಳಿದ್ದಾರೆ.
ಆದರೆ ಗೃಹ ಸಚಿವರು ಆತನ ಬಂಧನಕ್ಕೆ ಆದೇಶ ಮಾಡದೇ ಹೇಳಿಕೆಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಹೀಗಿರುವಾಗ ಈ ಸರ್ಕಾರ ಯಾವ ರೀತಿ ತನಿಖೆ ಮಾಡುತ್ತದೆ? ಇವರ ತನಿಖೆಯಿಂದ ಸತ್ಯಾಂಶ ಹೊರಕ್ಕೆ ಬರಲು ಸಾಧ್ಯವೇ ಎಂದು ಸಚಿವರು ಪ್ರಶ್ನಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಬಳ್ಳಾರಿ ಶೂಟೌಟ್ ಪ್ರಕರಣಕ್ಕೆ ಸಮಾಧಿ ಕಟ್ಟಲು ಹೊರಟಿದ್ದಾರೆ ಎಂದು ನೇರ ಆರೋಪ ಮಾಡಿದ ಕುಮಾರಸ್ವಾಮಿ ಅವರು; ಜನಾರ್ದನ ರೆಡ್ಡಿ ಅವರು ಭದ್ರತೆ ಕೊಡಿ ಎಂದು ಕೇಂದ್ರದ ಗೃಹ ಸಚಿವರಿಗೆ ಪತ್ರ ಬರೆದರೆ ಅದನ್ನು ಈ ಡಿಸಿಎಂ ಲೇವಡಿ ಮಾಡುತ್ತಾರೆ.
ಬೇಕಾದರೆ ಅಮೆರಿಕ, ಇರಾನ್ನಿಂದ ಭದ್ರತೆ ಮಾಡಿಸಿಕೊಳ್ಳಲಿ ಅಥವಾ ನೂರು ಜನ ಬಿಜೆಪಿ ಕಾರ್ಯಕರ್ತರನ್ನು ಭದ್ರತೆಗೆ ನಿಯೋಜಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಬಾಯಲ್ಲಿ ಬರುವ ಮಾತೇ ಇದು ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.



