ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಮಾನವ ಜನಾಂಗಕ್ಕೆ ದೇವರು ಕೊಟ್ಟ ಕೊಡುಗೆ ಅಪಾರ. ನಿಂತ ನೆಲ, ಹರಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಇವೆಲ್ಲಾ ದೇವರ ಕೊಡುಗೆ. ಅನ್ನ-ನೀರಿನಷ್ಟೇ ಮನುಷ್ಯನಿಗೆ ಧರ್ಮ ಪರಿಪಾಲನೆಯ ಅವಶ್ಯಕತೆ ಇದೆ. ಮನುಷ್ಯ ಹಲವಾರು ವ್ಯಸನಗಳಿಗೆ ಈಡಾಗಿ ಸಂಕಷ್ಟಕ್ಕೀಡಾಗುತ್ತಿದ್ದಾನೆ. ದುರ್ವ್ಯಸನಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತಿವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಬುಕ್ಕಾಂಬುಧಿ ಗ್ರಾಮದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಟ್ಟದವರೆಗೆ ಪ್ರಾರಂಭಗೊಂಡ ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಪುತ್ಥಳಿ ಮೆರವಣಿಗೆ ಸಂದರ್ಭದಲ್ಲಿ ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳವರು ಪಾಲ್ಗೊಂಡು ಪುಷ್ಪಾರ್ಚನೆಗೈದು ಚಾಲನೆಯಿತ್ತು ಲಿಖಿತ ಆಶೀರ್ವಚನ ನೀಡಿದರು.
ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಎಲ್ಲರೂ ಸುಖ ಬಯಸುವರೇ ವಿನಃ ಕಷ್ಟ ಯಾರಿಗೂ ಬೇಕಾಗಿಲ್ಲ. ಹೊರಗೆ ಬಡತನವಿದ್ದು, ಒಳಗೆ ಸಿರಿತನ ಇದ್ದರೆ ಬದುಕು ಬಲು ಸುಂದರ. ಹೊರಗೆ ಸಿರಿತನವಿದ್ದು ಒಳಗೆ ಬಡತನ ಇದ್ದರೆ ಬದುಕಿನ ಬಂಡಿ ಸುಗಮವಾಗಿ ಸಾಗದು. ಹೃದಯ ಶ್ರೀಮಂತಿಕೆಯಿಲ್ಲದೇ ಬುದ್ಧಿ ಶ್ರೀಮಂತಿಕೆ ಎಷ್ಟಿದ್ದರೂ ಪ್ರಯೋಜನವಿಲ್ಲ. ನೀರು ಎರೆದವರಿಗೂ ಕಡಿಯ ಬಂದವರಿಗೂ ಭೇದ-ಭಾವ ಎಣಿಸದೇ ವೃಕ್ಷವು ನೆರಳು, ಹಣ್ಣು ಕೊಡುತ್ತದೆ. ಅದರಂತೆ ಮಹಾತ್ಮರು ಯಾರಿಗೂ ಕೆಡಕು ಬಯಸದೇ ಹಿತವನ್ನೇ ಬಯಸಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀಮತ್ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆ ಹೋರಾಟ ಅನಿವಾರ್ಯ. ಸತ್ಯಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಸತ್ಯ ಧರ್ಮದ ರಕ್ಷಾ ಕವಚ. ಸುಳ್ಳಿಗೆ ಸುಣ್ಣ-ಬಣ್ಣ ಹಚ್ಚಬಹುದು. ನೈಜ ಸತ್ಯಕ್ಕೆ ಅದ್ಯಾವುದರ ಅವಶ್ಯಕತೆಯಿಲ್ಲ. ಬದುಕಿನ ಯಶಸ್ವಿಗಾಗಿ ಲೌಕಿಕ ಜ್ಞಾನ ಹೇಗೆ ಅಗತ್ಯವೋ ಹಾಗೆಯೇ ನೊಂದ ಮನಕ್ಕೆ ಆಧ್ಯಾತ್ಮಿಕ ಜ್ಞಾನ ಅವಶ್ಯಕವಾಗಿದೆ ಎಂದರು.
ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸ್ನೇಹ, ಸಂತೃಪ್ತಿ ಮತ್ತು ಸಂತೋಷಗಳೇ ಜೀವನದ ನಿಜವಾದ ಐಶ್ವರ್ಯ. ದುರ್ಜನರ ಸಹವಾಸದಿಂದ ದೂರವಿದ್ದು ಸಜ್ಜನರ ಸಹವಾಸ ಮಾಡುವುದು ಶ್ರೇಯಸ್ಕರ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸಬೇಕೆಂಬ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸಿದರು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಶಿವಾಚಾರ್ಯರು, ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು ಸೇರಿದಂತೆ ಸಿದ್ಧರಬೆಟ್ಟ, ಹುಣಸಘಟ್ಟ, ನಂದೀಪುರ, ಮಳಲಿ, ಹಣ್ಣೆ, ಕೆ.ಬಿದರೆ, ಅಂಬಲದೇವರಹಳ್ಳಿ, ಬೀರೂರು ಮೊದಲಾದ ಶ್ರೀಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸಾನ್ನಿಧ್ಯ ವಹಿಸಿದ ಇಂದಿನ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಸಂಪತ್ತಿನಿಂದ ಸಿಗುವ ಸುಖ ಸೌಕರ್ಯಗಳು ಬೇಕು. ಅವುಗಳನ್ನು ಪಡೆಯಲು ಶ್ರಮ ಮತ್ತು ಸಾಧನೆ ಬೇಡವಾಗಿದೆ. ಅಧರ್ಮ ದಾರಿಯಲ್ಲಿ ನೂರು ಹೆಜ್ಜೆ ಹಾಕುವುದಕ್ಕಿಂತ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು ತೋರಿದ ಮಹಾತ್ಮರ ದಾರಿಯಲ್ಲಿ ನಡೆದರೆ ಒಳ್ಳೆಯದು. ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶಿವಯೋಗ ಸಾಧನೆ ಮಾಡಿದ ತಪಸ್ಸು ಮತ್ತು ಬೋಧಿಸಿದ ಚಿಂತನಗಳು ಎಂದೆಂದಿಗೂ ನಮ್ಮೆಲ್ಲರಿಗೂ ದಾರಿದೀಪವೆಂದರು.



