ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ದೇಶ ಮತ್ತು ಧರ್ಮವು ಮನುಷ್ಯನ ಎರಡು ಕಣ್ಣುಗಳಾಗಿದ್ದು, ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ನಾಶವಾಗಬಾರದು. ಭಗವಂತನಿತ್ತ ಸಂಪತ್ತೇ ಬದುಕಿನ ನಿಜವಾದ ಅಮೂಲ್ಯ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಚಿಕ್ಕಮಗಳೂರು ನಗರದ ವೀರಶೈವ ಲಿಂಗಾಯತ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಲಾದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ನಡೆದ ಧರ್ಮಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ಮತ್ತು ಧರ್ಮವನ್ನು ಮರೆಯದ ಬದುಕೇ ಶಾಶ್ವತ ನೆಮ್ಮದಿಯ ಬದುಕು ಎಂದರು.
ದೇವರ ಮೇಲಿನ ನಂಬಿಕೆ ಮನುಷ್ಯನ ಬದುಕಿಗೆ ನಂದಾದೀಪವಾಗಿದ್ದು, ದೇವರು ಎಲ್ಲರಲ್ಲೂ ಇದ್ದರೂ ದೇವರಲ್ಲಿ ಎಲ್ಲರೂ ಇರುವುದಿಲ್ಲ. ಮಾನವ ಪರಿಪೂರ್ಣತೆಯತ್ತ ಸಾಗುವುದೇ ನಿಜವಾದ ಧರ್ಮ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗುವುದಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ತಿಳಿಸಿದರು.
ನಗರದಲ್ಲಿ ನಿರ್ಮಾಣಗೊಂಡಿರುವ ಶ್ರೀಮತಿ ಮೈತ್ರಾದೇವಿ–ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಭವನ ಸಮಾಜದ ಐಕ್ಯತೆಯ ಪ್ರತೀಕವಾಗಿದೆ. ಇದರ ನಿರ್ಮಾಣಕ್ಕೆ ಸಹಕರಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲ ಸಮಾಜಬಾಂಧವರ ಸೇವೆ ಶ್ಲಾಘನೀಯ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪರಿಪಕ್ವ ಸಮಾಜ ನಿರ್ಮಾಣವೇ ನಿಜವಾದ ಧರ್ಮ. ಸಮಾಜದ ಸಂಘಟಿತ ಪ್ರಯತ್ನದಿಂದ ನಿರ್ಮಾಣಗೊಂಡ ಈ ಭವನ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ನಗರಕ್ಕೆ ಈ ಭವ್ಯ ಭವನ ಮತ್ತು ದೇವಸ್ಥಾನ ಹೊಸ ಕಳಸವಿಟ್ಟಂತಾಗಿದೆ. ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧಾರ್ಮಿಕ ಕೇಂದ್ರಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹಾಗೂ ದೇವಸ್ಥಾನದ ದಾನಿಗಳಾದ ಸಂಗೀತಾ–ಎಸ್.ಬಿ. ತಿಪ್ಪಾರೆಡ್ಡಿ ಕುಟುಂಬವನ್ನು ಸನ್ಮಾನಿಸಲಾಯಿತು. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
“ದೇವರ ಮೇಲಿನ ನಂಬಿಕೆ ಬದುಕಿನ ಶಾಶ್ವತ ನಂದಾದೀಪ; ಭಗವಂತನಿತ್ತ ಸಂಪತ್ತೇ ನಿಜವಾದ ಐಶ್ವರ್ಯ.”
– ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯರು



