HomeGadag News"ಧರೆಗೆ ಇಳಿದು ಬಾ ಮಳೆರಾಯ" ಎಂದು ಪ್ರಾರ್ಥಿಸಿದ ರೈತ ಮಹಿಳೆಯರು: ಜಕ್ಕಲಿಯಲ್ಲಿ ವಿಶೇಷ ಪೂಜೆ

“ಧರೆಗೆ ಇಳಿದು ಬಾ ಮಳೆರಾಯ” ಎಂದು ಪ್ರಾರ್ಥಿಸಿದ ರೈತ ಮಹಿಳೆಯರು: ಜಕ್ಕಲಿಯಲ್ಲಿ ವಿಶೇಷ ಪೂಜೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರು ಕೈಕೊಟ್ಟು ಹೊಲಗಳಲ್ಲಿ ಬೆಳೆಗಳು ಒಣಗಲಾರಂಭಿಸಿರುವ ಹಿನ್ನೆಲೆಯಲ್ಲಿ ಸಮೀಪದ ಜಕ್ಕಲಿ ಗ್ರಾಮದ ರೈತ ಮಹಿಳೆಯರು ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, “ಧರೆಗೆ ಇಳಿದು ಬೇಗ ಬಾ ಮಳೆರಾಯ” ಎಂದು ವರುಣ ದೇವರಲ್ಲಿ ಪ್ರಾರ್ಥಿಸಿದರು.

ಹೆಸರು, ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ, ಮಹಿಳೆಯರು ಶ್ರೀ ಕಲ್ಮೇಶ್ವರ ಹಾಗೂ ಉಕ್ಕಿ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಸಂಕಲ್ಪ ಮಾಡಿದರು. ಕಳೆದ ಹತ್ತು ವರ್ಷಗಳಿಂದ ಈ ಸಂಪ್ರದಾಯವನ್ನು ಗ್ರಾಮದಲ್ಲಿ ನಿರಂತರವಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮಳೆ ಭವಿಷ್ಯ ತಿಳಿಯುವ ಪಾರಂಪರಿಕ ಆಚರಣೆಗಳಾದ ಸೆಗಣಿಯ ಬೂದಪ್ಪ ಹಾಗೂ ಜೋಳದ ದಂಟುಗಳ ಮೂಲಕ ಮಳೆ ಅಂದಾಜಿಸುವ ಪದ್ಧತಿ ನಡೆಸಲಾಯಿತು. ಬಳಿಕ ಹೂಗಳಿಂದ ಅಲಂಕರಿಸಿದ ತುಂಬಿದ ಕೊಡವನ್ನು ಮಹಿಳೆಯರು ಮತ್ತು ಮಕ್ಕಳು ಸೇರಿ ತಿರುಗಿಸುವ ಮೂಲಕ ಮಳೆಯ ಭವಿಷ್ಯ ತಿಳಿಯುವ ಸಂಪ್ರದಾಯಕ್ಕೂ ಜೀವ ತುಂಬಿದರು.

ಈ ವೇಳೆ ಸುಮ್ಮವ್ವ ಹೂಗಾರ ಅವರು ಉತ್ತಮ ಮಳೆಯಾಗಿ ರೈತರ ಬದುಕು ಸಮೃದ್ಧಿಯಾಗಲಿ ಎಂದು ದೇವರ ಸನ್ನಿಧಿಯಲ್ಲಿ ಐದು ಸುತ್ತು ದೀರ್ಘ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದ್ದು ಭಕ್ತರ ಗಮನ ಸೆಳೆಯಿತು.

ಮಹಿಳೆಯರು ಮಡಿ ಬಟ್ಟೆ ಧರಿಸಿ ಕೊಡಗಳಲ್ಲಿ ನೀರು ತುಂಬಿಕೊಂಡು “ಓಂ ನಮಃ ಶಿವಾಯ” ಜಪಿಸುತ್ತಾ ಜಲಾಭಿಷೇಕ ನೆರವೇರಿಸಿದರು. ಬಸವಣ್ಣನವರ ವಚನಗಳು, ಭಕ್ತಿಪದಗಳು ಹಾಗೂ ಜನಪದ ಗೀತೆಗಳ ಗಾಯನದೊಂದಿಗೆ ದೇವಸ್ಥಾನದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಯಿತು. ಬಳಿಕ ಶಿರಾ ಹಾಗೂ ಸಂಗಟಿ-ಸಾರು ಅನ್ನಸಂತರ್ಪಣೆ ನಡೆಯಿತು.

ಇದೇ ಸಂದರ್ಭದಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹುರ್ರಾ ಟಾಪ್ ಶಿಖರ ಏರಿ ಸಾಧನೆ ಮಾಡಿದ ಜಕ್ಕಲಿ ಗ್ರಾಮದ ಪ್ರತಿಭಾವಂತ ಯುವತಿ ಸೃಷ್ಟಿ ಉಮೇಶ ಮೇಟಿ ಅವರನ್ನು ಶ್ರೀ ಕಲ್ಮೇಶ್ವರ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮೇಟಿ ಹಾಗೂ ಡಾ. ಎ.ವಿ. ನರೇಗಲ್ಲ, ಸೃಷ್ಟಿ ಮೇಟಿ ಅವರ ಸಾಧನೆ ಗ್ರಾಮೀಣ ಯುವಜನತೆಗೆ ಸ್ಫೂರ್ತಿಯಾಗಿದ್ದು, ಹಳ್ಳಿಯ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಶ್ಲಾಘಿಸಿದರು.

ಗುರುಲಿಂಗಮೂರ್ತಿ ಮಂಟಯ್ಯನವರಮಠ, ಅಶೋಕಪ್ಪ ಯಾವಗಲ್ಲ, ಪ್ರಭು ರೇಣುಕಮಠ, ಸಂಗಮೇಶ ಮೆಣಸಗಿ, ಶೇಖರ ಯಾವಗಲ್ಲ, ಸುಭಾಷ ಪಲ್ಲೇದ, ಶಿವಪುತ್ರಯ್ಯ ಸರಗಣಾಚಾರಿ, ಮುನಿಯಪ್ಪ ಪಲ್ಲೇದ, ಚನ್ನಬಸವ ಅರಹುಣಸಿ, ಉಮೇಶ ಮೇಟಿ, ಮಂಜುನಾಥ ಪಲ್ಲೇದ, ಕುಬೇರಪ್ಪ ಪಲ್ಲೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೀಲಾಂಬಿಕೆ ಮೇಟಿ ಹಾಗೂ ಮಹೇಶಮ್ಮ ಹೈತಾಪೂರ ಅವರ ನೇತೃತ್ವದಲ್ಲಿ ನೂರಾರು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಳೆಗಾಗಿ “ಕೊಡ ತಿರುಗಿಸುವ” ವಿಶಿಷ್ಟ ಸಂಪ್ರದಾಯ

ಜಕ್ಕಲಿ ಗ್ರಾಮದಲ್ಲಿ ಮಳೆಗಾಗಿ ಪಾರಂಪರಿಕ “ಕೊಡ ತಿರುಗಿಸುವ” ಆಚರಣೆ ವಿಶೇಷ ಆಕರ್ಷಣೆಯಾಗಿತ್ತು. ಹೂಗಳಿಂದ ಅಲಂಕರಿಸಿದ ನೀರು ತುಂಬಿದ ಕೊಡದ ಕೆಳಗೆ ಜೋಳ ಹಾಕಿ, ಮಕ್ಕಳು ಹಾಗೂ ಸುಮಂಗಲಿ ಮಹಿಳೆಯರು ಸೇರಿ ಕೊಡ ತಿರುಗಿಸಿದರು. ಗ್ರಾಮಸ್ಥರ ನಂಬಿಕೆಯಂತೆ ಕೊಡ ವೇಗವಾಗಿ ತಿರುಗಿದರೆ ಉತ್ತಮ ಮಳೆಯಾಗುತ್ತದೆ, ನಿಧಾನವಾಗಿ ತಿರುಗಿದರೆ ಕಡಿಮೆ ಮಳೆಯಾಗುತ್ತದೆ. ಕೊಡದಿಂದ ನೀರು ಹೊರಗೆ ಚೆಲ್ಲಿದರೆ ಶೀಘ್ರದಲ್ಲೇ ಮಳೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಗ್ರಾಮೀಣ ಸಂಪ್ರದಾಯ ಮತ್ತು ರೈತರ ಪ್ರಕೃತಿ ನಂಬಿಕೆಗೆ ಈ ಆಚರಣೆ ಸಾಕ್ಷಿಯಾಯಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img