ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: “ಆಧ್ಯಾತ್ಮದ ಅಮರ ಸಂಪತ್ತನ್ನು ಕರುಣಿಸಿ, ಬದುಕಿಗೆ ಸತ್ಯದ ಬೆಳಕು ತೋರಿಸುವವನೇ ನಿಜವಾದ ಗುರು” ಎಂದು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪೀಠಾಧಿಪತಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಬುಧವಾರ ರಂಭಾಪುರಿ ಪೀಠದಲ್ಲಿ ನಡೆದ ಗುರುಪೌರ್ಣಿಮೆ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಶ್ರೇಷ್ಠ ಜ್ಞಾನಿಗಳು ಮತ್ತು ಅನುಭಾವಿಗಳು ಕಂಡ ಸತ್ಯದ ಬೆಳಕನ್ನು ಸಮಾಜಕ್ಕೆ ತೋರಿಸಿ ಜನರ ಉದ್ಧಾರ ಮಾಡಿದ್ದಾರೆ. ಅಲೌಕಿಕ ಇಚ್ಛೆಗಳನ್ನು ಈಡೇರಿಸುವುದರ ಜೊತೆಗೆ ಆಧ್ಯಾತ್ಮಿಕ ಬದುಕಿನತ್ತ ಕರೆದೊಯ್ಯುವವನೇ ನಿಜವಾದ ಗುರು ಎಂದು ತಿಳಿಸಿದರು.
ಸತ್ಸಂಗವು ಮನುಷ್ಯನಲ್ಲಿರುವ ಜಾತಿ, ಮತ, ಸ್ಥಾನಮಾನಗಳ ಭೇದವನ್ನು ದೂರ ಮಾಡುತ್ತದೆ. ‘ನಾನು’ ಎಂಬ ಅಹಂಕಾರವನ್ನು ತೊರೆದು ಭವಬಂಧನದಿಂದ ಮುಕ್ತಿಗೊಳಿಸುವ ಶಕ್ತಿ ಗುರುವಿನಲ್ಲಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರು ಎಂದು ಅವರು ಹೇಳಿದರು.
ಗುರುಪೌರ್ಣಿಮೆ ಅಂಗವಾಗಿ ಭಕ್ತರು ಜಗದ್ಗುರುಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹುಡುಗಿ ಸೋಮೇಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಹುಬ್ಬಳ್ಳಿಯ ಆರ್.ಎಂ. ಹಿರೇಮಠ ಹಾಗೂ ಅವರ ಕುಟುಂಬದವರು ಗುರುಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಶ್ರೀಪೀಠದ ವಿವಿಧ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
“ಪ್ರಾಪಂಚಿಕ ಸಂಪತ್ತು ಬದುಕನ್ನು ವೈಭವಪೂರ್ಣಗೊಳಿಸಿದರೆ, ಪಾರಮಾರ್ಥಿಕ ಸಂಪತ್ತು ಬದುಕನ್ನು ಅನುಭಾವಪೂರ್ಣಗೊಳಿಸುತ್ತದೆ. ಆ ಅನುಭಾವದ ಅಮೃತವನ್ನು ತುಂಬುವವನೇ ಶ್ರೀಗುರು.”
– ಡಾ. ವೀರಸೋಮೇಶ್ವರ ಜಗದ್ಗುರುಗಳು



