ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆ, ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಖ್ಯಾತ ವೈದ್ಯರುಗಳು ಅಗಲಿದ ಶಿಕ್ಷಕರ ಸ್ಮರಣಾರ್ಥ ಜ.9ರಂದು ಎಸ್.ಎಸ್. ಕೂಡ್ಲಮಠ ಶಾಲಾವರಣದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಹೇಳಿದರು.
ಅವರು ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, 6 ದಶಕಗಳಿಂದ ಶಿಕ್ಷಣ ಸೇವೆಯಲ್ಲಿ ನಿರತವಾಗಿರುವ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಖ್ಯಾತ ವೈದ್ಯರುಗಳಾದ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಎಸ್.ಪಿ. ಬಳಿಗಾರ, ಹೃದಯರೋಗ ತಜ್ಞರಾದ ಡಾ. ರವಿ ಸಾಲ್ಮನಿ, ಡಾವಣಗೆರೆ ಎಸ್.ಎಸ್. ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಎನ್.ಕೆ. ಕಾಳಪ್ಪನವರ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿನೋದ ರಟಗೇರಿ, ತಜ್ಞವೈದ್ಯರಾದ ಪ್ರದೀಪ ಕಲ್ಲೊಳ್ಳಿಮಠ, ಲಂಡನ್ನ ರೇಡಿಯೋಲಾಜಿಸ್ಟ್ ಡಾ. ರಾಜಶ್ರೀ ಪಾಟೀಲ ಸೇರಿ ಸ್ಥಳೀಯ ವೈದ್ಯರುಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.
ಆರೋಗ್ಯ ಶಿಬಿರವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸುವರು, ಎಸ್.ಪಿ. ಬಳಿಗಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಗದಗ ಜಿಮ್ಸ್ ನಿರ್ದೇಶಕರಾದ ಬಸವರಾಜ ಬೊಮ್ಮನಹಳ್ಳಿ, ಎಫ್.ಡಿ. ಹುನಗುಂದ ಉಪಸ್ಥಿತರಿರುವರು. ಸಂಜೆ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಲಿದೆ ಎಂದು ಹೇಳಿದರು.
ಈ ವೇಳೆ ಸಿ.ಎಂ. ರಾಗಿ, ಎಚ್.ಎಫ್. ತಳವಾರ, ಬಿ.ಎಂ. ಕಳಸದ, ಎಂ.ಎನ್. ಪಾಟೀಲ, ವೀರಣ್ಣ ಪವಾಡದ, ಪ್ರವೀಣ ಕಾಳಪ್ಪನವರ, ರಮೇಶ ಅಣ್ಣಿಗೇರಿ, ಸಿ.ಬಿ. ಮುಗಳಿ, ಎಲ್.ಪಿ. ಲಮಾಣಿ, ಆರ್.ಎಂ. ಜಂಬೇರಾಳ ಮುಂತಾದವರಿದ್ದರು.



