ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಜ. 13ರಿಂದ 15ರವರೆಗೆ ನಡೆಯುವ ಖಡಕ್ ರೊಟ್ಟಿ-ಕರಿಂಡಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಜಮಖಂಡಿಯ ಗದಿಗೆಯ್ಯ ದೇವರ ನೇತೃತ್ವದಲ್ಲಿ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ, ಕಡಬು ಇತರೆ ಆಹಾರ ಪದಾರ್ಥ ಸಂಗ್ರಹಿಸುವ ಕಾರ್ಯ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕಳೆದ 46 ವರ್ಷಗಳಿಂದ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವಕ್ಕೆ ಒಂದು ವಾರ ಮೊದಲು ಗ್ರಾಮದಲ್ಲಿನ ಎಲ್ಲ ಜಾತಿ, ಜನಾಂಗದವರೂ ರೊಟ್ಟಿ, ದವಸ-ಧಾನ್ಯಗಳನ್ನು ಕೈಲಾದ ಮಟ್ಟಿಗೆ ಮಠಕ್ಕೆ ತಂದು ಸಲ್ಲಿಸುವುದು ಸಂಪ್ರದಾಯ. ಕಳೆದ ವರ್ಷದಿಂದ ಶ್ರೀಗಳೇ ಎತ್ತಿನ ಬಂಡಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸ-ಧಾನ್ಯ ಸಂಗ್ರಹಿಸಿ ಮೆರವಣಿಗೆ ಮೂಲಕ ಮಠಕ್ಕೆ ತರುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಶ್ರೀಗಳೇ ಭಕ್ತರ ಮನೆ ಬಾಗಿಲಿನತ್ತ ಬರುತ್ತಾರೆಂಬ ಸಂಭ್ರಮದಿಂದ ಗ್ರಾಮ ಪಂಚಾಯಿತಿಯವರು ಊರೆಲ್ಲ ಸ್ವಚ್ಛತೆ ಮಾಡಿದ್ದರು. ಪ್ರತಿ ಓಣಿಯಲ್ಲೂ ಭಕ್ತರು ತಮ್ಮ ಮನೆಯ ಮುಂದೆ ತಳಿರು-ತೋರಣ ಕಟ್ಟಿ, ರಂಗೋಲಿ ಹಾಕಿದ್ದರು. ಜಾತ್ರೆಯ ಪ್ರಸಾದ ಸೇವೆಗಾಗಿ ಪ್ರತಿ ಮನೆಯಲ್ಲಿ ಮೊದಲೇ ಸಿದ್ಧಪಡಿಸಿದ್ದ ನೂರಾರು ರೊಟ್ಟಿಗಳ ಎಣ್ಣೆಬುಟ್ಟಿಗೆ ಹೊಸ ಬಟ್ಟೆ ಕಟ್ಟಿ ಪೂಜೆ ಮಾಡಿ ತಲೆಯ ಮೇಲೆ ಹೊತ್ತು ಕಾಯುತ್ತಿದ್ದರು. ಶ್ರದ್ಧಾ ಭಕ್ತಿಯಿಂದ ರೊಟ್ಟಿ ಬುಟ್ಟಿ ಹೊತ್ತು ತಂದ ತಾಯಂದಿರ ತಲೆಯ ಮೇಲಿನ ಬುಟ್ಟಿಯನ್ನು ಮುಟ್ಟಿ ಆಶೀರ್ವದಿಸಿದ ಬಳಿಕ ಸಾಲುಗಟ್ಟಿ ಬರುತ್ತಿದ್ದ ಎತ್ತಿನ ಚಕ್ಕಡಿಯಲ್ಲಿ ರೊಟ್ಟಿ ಸಂಗ್ರಹಿಸಲಾಗುತ್ತಿತ್ತು. ಅಲ್ಲದೇ ನೂರಾರು ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತು ಮೆರವಣಿಗೆ ಮೂಲಕ ಮಠದವರೆಗೂ ತಲುಪಿಸಿ ಸಂತೃಪ್ತ ಭಾವ ವ್ಯಕ್ತಪಡಿಸಿದರು.
ಅಲಂಕೃತ ಎತ್ತಿನ ಬಂಡಿ, ಭಜನೆ, ಡೊಳ್ಳು ವಾದ್ಯಮೇಳದ ಮೆರವಣಿಗೆಯಲ್ಲಿ ವೇಳೆ ಎಲ್ಲ ಜಾತಿ, ಜನಾಂಗದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಶ್ರೀಮಠದ ಭಕ್ತ ಮಂಡಳಿಯ ಅಂದಾನಯ್ಯ ಹಿರೇಮಠ, ನೀಲಪ್ಪ ಹೊಸೂರ, ಆರ್.ಎಸ್. ಪಾಟೀಲ, ಮಾದೇವಪ್ಪ ಬಿಷ್ಟಣ್ಣವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಂಜೆಯ ಬಳಿಕ ರತೋತ್ಸವಕ್ಕೆ ಕಲಶಾರೋಹಣ ನೆರವೇರಿಸಲಾಯಿತು.
“ಹೂವಿನಶಿಗ್ಲಿ ಮಠದಲ್ಲಿ ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಜರುಗುವ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಖಡಕ್-ರೊಟ್ಟಿ, ಕರಿಂಡಿ, ಕಡಬು ಪ್ರಸಾದ ಮಾಡುವ ಸಂಪ್ರದಾಯವನ್ನು ಶ್ರೀಮಠದ ಲಿಂ. ನಿರಂಜನ ಮಹಾಸ್ವಾಮಿಗಳು ಹಾಕಿಕೊಟ್ಟಿದ್ದಾರೆ. 5 ದಶಕಗಳಿಂದ ಭಕ್ತರು ಮಠಕ್ಕೆ ರೊಟ್ಟಿ, ಧಾನ್ಯ ತಂದು ಕೊಡುತ್ತಿದ್ದರು. 2 ವರ್ಷದಿಂದ ನಾವೇ ಭಕ್ತರ ಮನೆಯತ್ತ ಹೋಗಿ ಬಂಡಿ ಮೂಲಕ ರೊಟ್ಟಿ ಸಂಗ್ರಹಿಸುವ ಕಾರ್ಯ ಮಾಡಿದ್ದೇವೆ. ಗ್ರಾಮದ ಭಕ್ತರು ಶ್ರೀಮಠದ ಶಕ್ತಿ ಮತ್ತು ಸಂಪತ್ತಾಗಿದ್ದು, ಜಾತ್ರೆಯಷ್ಟೇ ಅಲ್ಲದೇ ವರ್ಷದುದ್ದಕ್ಕೂ ಗುರುಕುಲ ಮತ್ತು ಶಾಲೆಯ ಮಕ್ಕಳ ತ್ರಿವಿಧ ದಾಸೋಹ ಸೇವೆಗೆ ಸೇವೆ ಮಾಡುತ್ತಾ ಬಂದಿದ್ದಾರೆ. ಜಾತ್ರೆಯ 3 ದಿನಗಳ ಕಾಲ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿವೆ. ಎಲ್ಲ ಕಾರ್ಯಗಳಿಗೆ ಭಕ್ತರ ಸೇವೆ- ಸಹಾಯ-ಸಹಕಾರ ಸ್ಮರಣೀಯ”
-
ಶ್ರೀ ಚನ್ನವೀರ ಮಹಾಸ್ವಾಮಿಗಳು.
“ನಮ್ಮೂರಲ್ಲಿನ ಮಠದ ಲಿಂ. ನಿರಂಜನ ಸ್ವಾಮಿಗಳು ಮತ್ತು ಈಗಿನ ಚನ್ನವೀರ ಶ್ರೀಗಳ ಹೂವಿನಶಿಗ್ಲಿ ಎಂಬ ಚಿಕ್ಕ ಗ್ರಾಮ ನಾಡಿನೆಲ್ಲೆಡೆ ಹೆಸರಾಗಿದೆ. ಶ್ರೀಮಠದ ಗುರುಕುಲದ ಮಕ್ಕಳಿಗಾಗಿ, ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವಕ್ಕಾಗಿ ಅನ್ನದಾನದ ಅಳಿಲು ಸೇವೆ ಮಾಡುವ ಅವಕಾಶ ಕಲ್ಪಿಸಿರುವುದು ನಮ್ಮ ಭಾಗ್ಯ. ಶ್ರೀಮಠ ನಮ್ಮೂರ ಜನರಲ್ಲಿ ಮೇಲು-ಕೀಳು, ಬಡವ-ಶ್ರೀಮಂತ ಬೇಧ-ಭಾವ ಹೋಗಲಾಡಿಸಿ ಎಲ್ಲರೂ ಸೌಹಾರ್ದತೆ, ಸಹೋದರತೆಯ ಭಾವದಿಂದ ಬದುಕುವುದಕ್ಕೆ ಪ್ರೇರಣೆಯಾಗಿದೆ”
-
ಗಿರಿಜವ್ವ ಶ್ಯಾಮಸುಂದರ.
ಶ್ರೀಮಠದ ಭಕ್ತೆ.



