HomeGadag News‘ಈ ಬಂಗಾರ ನಮ್ಮದಲ್ಲ’ ಎಂದ 14 ವರ್ಷದ ಬಾಲಕ… ಲಕ್ಕುಂಡಿಯಲ್ಲಿ ಪ್ರಾಮಾಣಿಕತೆ ಇತಿಹಾಸ, ಸರ್ಕಾರದಿಂದ ಮನೆ–ಜಾಬ್...

‘ಈ ಬಂಗಾರ ನಮ್ಮದಲ್ಲ’ ಎಂದ 14 ವರ್ಷದ ಬಾಲಕ… ಲಕ್ಕುಂಡಿಯಲ್ಲಿ ಪ್ರಾಮಾಣಿಕತೆ ಇತಿಹಾಸ, ಸರ್ಕಾರದಿಂದ ಮನೆ–ಜಾಬ್ ಭರವಸೆ

For Dai;y Updates Join Our whatsapp Group

Spread the love

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದ ನಿಧಿ ಪತ್ತೆ ಪ್ರಕರಣವನ್ನು ಸಚಿವ ಎಚ್.ಕೆ. ಪಾಟೀಲ್ ‘ದೊಡ್ಡ ಇತಿಹಾಸ ಸೃಷ್ಟಿ’ ಎಂದು ಬಣ್ಣಿಸಿದ್ದಾರೆ.

ಲಕ್ಕುಂಡಿ ರಾಷ್ಟ್ರಕೂಟರು ಮತ್ತು ಚಾಲುಕ್ಯರ ಆಳ್ವಿಕೆಗೆ ಒಳಪಟ್ಟ ಐತಿಹಾಸಿಕ ನಾಡಾಗಿದ್ದು, ಇಲ್ಲಿ ಅನೇಕ ಅದ್ಭುತ ಘಟನೆಗಳು ನಡೆದಿವೆ ಎಂದು ಅವರು ಹೇಳಿದ್ದಾರೆ. ಲಕ್ಕುಂಡಿಯಲ್ಲಿ ಪ್ರತೀ ಮಳೆಗಾಲದಲ್ಲಿ ಮುತ್ತು, ರತ್ನ, ಹವಳಗಳು ಸಿಗುವಷ್ಟು ಶ್ರೀಮಂತ ಪರಂಪರೆ ಇದೆ. ಈ ಹಿನ್ನೆಲೆ ಲಕ್ಕುಂಡಿಯನ್ನು ವಿಶ್ವಪಾರಂಪರ್ಯ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಅಗತ್ಯವಿರುವ ಎಲ್ಲಾ ಸಾಮರ್ಥ್ಯವೂ ಲಕ್ಕುಂಡಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಎರಡು ದಿನಗಳ ಹಿಂದೆ ಲಕ್ಕುಂಡಿಯಲ್ಲಿ 466 ಗ್ರಾಂ ಬಂಗಾರ ಹಾಗೂ 634 ಗ್ರಾಂ ತಾಮ್ರದ ತಂಬಿಗೆ ಪತ್ತೆಯಾಗಿದ್ದು, ಅದನ್ನು ಜಿಲ್ಲಾಡಳಿತಕ್ಕೆ ಕಾನೂನುಬದ್ಧವಾಗಿ ಒಪ್ಪಿಸಲಾಗಿದೆ. 14 ವರ್ಷದ ಪ್ರಜ್ವಲ್ ರಿತ್ತಿ ಎಂಬ ಬಾಲಕ ಮನೆ ನಿರ್ಮಾಣದ ಸಂದರ್ಭದಲ್ಲಿ ತಂಬಿಗೆ ಕಂಡು ತಕ್ಷಣ ತಾಯಿಗೆ ಮಾಹಿತಿ ನೀಡಿದ್ದು, ನಂತರ ಸಿದ್ದು ಪಾಟೀಲ್ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆ ಬಾಲಕ ತಂಬಿಗೆಯನ್ನು ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಇಟ್ಟು ಬೀಗ ಹಾಕಿ ಕಾಯ್ದುಕೊಂಡಿದ್ದನು. ನಂತರ ಜಿಲ್ಲಾಡಳಿತ ಕಾನೂನು ಪ್ರಕಾರ ಅದನ್ನು ವಶಕ್ಕೆ ಪಡೆದಿದೆ.

ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಾಗ, ಬಾಲಕ “ಸರ್ಕಾರಕ್ಕೆ ಕೊಡುತ್ತೇನೆ” ಎಂದು ಹೇಳಿದ ಗುಣವೇ ನಿಧಿಗಿಂತ ದೊಡ್ಡ ಮೌಲ್ಯ ಎಂದು ಮುಖ್ಯಮಂತ್ರಿ ಪ್ರಶಂಸಿಸಿದ್ದಾರೆ. ಪ್ರಜ್ವಲ್ ಈ ಮೂಲಕ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಎಂದು ಸಚಿವರು ಹೇಳಿದರು.

ಸಚಿವ ಎಚ್.ಕೆ. ಪಾಟೀಲ್ ಲಕ್ಕುಂಡಿಯ ನಿಧಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಸ್ತೂರವ್ವ ರಿತ್ತಿ ಕುಟುಂಬಕ್ಕೆ ಭೇಟಿ ನೀಡಿ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಡಳಿತದ ವತಿಯಿಂದ ಕಸ್ತೂರವ್ವ ರಿತ್ತಿ ಮತ್ತು ಪ್ರಜ್ವಲ್ ರಿತ್ತಿಗೆ ಸನ್ಮಾನ ನೆರವೇರಿಸಿದ್ದಾರೆ. ಪ್ರಜ್ವಲ್ ಮೇಲೆ ಹೂವಿನ ಸುರಿಮಳೆಗೈದು ಗೌರವ ಸಲ್ಲಿಸಿದ್ದು, ಬಳಿಕ ಕುಟುಂಬವನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು.

ಈ ನಿಧಿಯನ್ನು ಕಾನೂನುಬದ್ಧವಾಗಿ ಎಲ್ಲಿ ಇರಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಪ್ರಜ್ವಲ್ ಕುಟುಂಬಕ್ಕೆ ವಿಶೇಷ ನೆರವು ನೀಡುವಂತೆ ಗ್ರಾಮದ ಹಿರಿಯರು ಮನವಿ ಸಲ್ಲಿಸಿದ್ದು, ಮನೆ, ಜಾಗ ಹಾಗೂ ತಾಯಿಗೆ ಉದ್ಯೋಗ ನೀಡುವ ಬೇಡಿಕೆ ಇಟ್ಟಿದ್ದಾರೆ. ಈ ಮೂರು ವಿಷಯಗಳನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ, ಸಂಪುಟ ಸಭೆಯಲ್ಲಿ ಮಂಡಿಸಿ ನಾಳೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಲಕ್ಕುಂಡಿಯಲ್ಲಿ ಇದುವರೆಗೂ 1100ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಗ್ರಾಮಸ್ಥರು ಸರ್ಕಾರಕ್ಕೆ ನೀಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ದಾಖಲೆ ಎಂದು ಸಚಿವರು ಹೇಳಿದರು. ಅದಕ್ಕೆ ಕಿರೀಟವೆಂಬಂತೆ ಈಗ ನಿಧಿಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ಈಗಾಗಲೇ 16 ದೇವಸ್ಥಾನ ಮತ್ತು ಬಾವಿಗಳನ್ನು ರಕ್ಷಿತ ಸ್ಮಾರಕಗಳಾಗಿ ಸರ್ಕಾರ ಘೋಷಿಸಿದೆ. 165 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನಗಳ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ, ಆರು ದೇವಸ್ಥಾನಗಳ ಅಭಿವೃದ್ಧಿ ಪ್ರಗತಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ತಪ್ಪು ಮಾಹಿತಿಯಿಂದ ಕೆಲ ಗೊಂದಲ ಉಂಟಾಗಿದ್ದರೂ, ಜಿಲ್ಲಾಧಿಕಾರಿಗಳು ಅದನ್ನು ಬಗೆಹರಿಸಿದ್ದಾರೆ. ಕಾನೂನು ಪ್ರಕಾರ ಕುಟುಂಬಕ್ಕೆ ಯಾವ ನೆರವು ಕೊಡಬೇಕು, ಅದನ್ನೆಲ್ಲ ಮಾಡಲಾಗುತ್ತದೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ ಮತ್ತು ಉದ್ಯೋಗ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು. ಹೂವಿನ ಹಾರ ಕಟ್ಟಿಕೊಂಡು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಈ ಬಡ ಕುಟುಂಬ, ಇಂತಹ ಸ್ಥಿತಿಯಲ್ಲಿಯೂ ‘ಈ ಬಂಗಾರ ನಮ್ಮದಲ್ಲ’ ಎಂದು ಸರ್ಕಾರಕ್ಕೆ ಒಪ್ಪಿಸಿದ್ದು, ಅವರ ಪ್ರಾಮಾಣಿಕತೆಗೆ ಸಂಪೂರ್ಣ ಗೌರವ ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!