ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣದಲ್ಲಿರುವ ಸೋಮನಾಥ ಲಿಂಗೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾಗಿದ್ದು, ಈ ದೇವಸ್ಥಾನವನ್ನು ದ್ರೋಣಾಚಾರ್ಯರು ನಿರ್ಮಿಸಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಹೇಳಿದರು.
ಅವರು ಮಂಗಳವಾರ ಸಂಗನಗೌಡ (ಮಿಥುನ್) ಪಾಟೀಲರ ಅಭಿಮಾನಿ ಬಳಗದವರು ಸೋಮನಾಥ ಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರೋಣ ಪಟ್ಟಣಕ್ಕೆ ಪ್ರಾಚೀನ ಕಾಲದಲ್ಲಿ ದ್ರೋಣಾಪೂರ ಎಂಬ ಹೆಸರಿತ್ತು. ಅಲ್ಲದೆ ಇಲ್ಲಿ ದ್ರೋಣಾಚಾರ್ಯರು ನೆಲೆಸುವ ಮೂಲಕ ಪಟ್ಟಣದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಎಂಬ ಕುರುಹುಗಳು ಇಂದಿಗೂ ಸಿಗುತ್ತವೆ. ಮುಖ್ಯವಾಗಿ ಮಹಾಭಾರತದಲ್ಲಿ ಕೌರವವರು ಹಾಗೂ ಪಾಂಡವರಿಗೆ ಯುದ್ಧದ ನೈಪುಣ್ಯತೆಯನ್ನು ಹೇಳಿಕೊಟ್ಟ ನೆಲ ನಮ್ಮ ದ್ರೋಣಾಪೂರ ಎಂಬುದು ದೇವಸ್ಥಾನಗಳ ಕಲ್ಲಿನ ಬರೆಯಲಾಗಿರುವ ಬರಹಗಳಲ್ಲಿ ತಿಳಿದುಬರುತ್ತದೆ ಎಂದರು.
ನಮ್ಮ ನಾಡು ಹಾಗೂ ದೇಶದಲ್ಲಿ ಜಕಣಾಚಾರ್ಯರು ಕಟ್ಟಿದ ದೇವಸ್ಥಾನಗಳು ನಮಗೆ ಕಾಣಸಿಗುತ್ತವೆ. ವಿಪರ್ಯಾಸ ಅಂದರೆ ದ್ರೋಣಾಚಾರ್ಯರು ಕಟ್ಟಿರುವ ದೇವಸ್ಥಾನಗಳನ್ನು ರೋಣ ಪಟ್ಟಣದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಪಟ್ಟಣದ ಜನತೆ ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ಪ್ರಾಚೀನ ದೇವಸ್ಥಾನಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಬೇಕು. ಅಂದಾಗ ನಮ್ಮ ಊರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ ದಂಪತಿಗಳನ್ನು ಸತ್ಕರಿಸಲಾಯಿತು. ಅಸ್ಲಂ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಬಸವರಾಜ ಹಲಗಿ, ಶಾಬಾಜ್ ಗದಗ, ಬಶೀರ ಕಟ್ಟಿಮನಿ, ತೌಹಿದ್ ಜಲವಾರ, ಸಮೀರ್ ದೊಡ್ಡಮನಿ, ಕೈಪ್ ಮಕಾಂದಾರ, ಮೋದಿನ ಹುಲ್ಯಾಳ, ಭರತ್ ಮಾನೆ, ಮಹದೇವಪ್ಪ ತೆಗ್ಗಿನಮನಿ, ಮಲ್ಲು ರಾಯನಗೌಡ್ರ, ಶಶಿಕುಮಾರ ಹಾದಿಮನಿ ಸೇರಿದಂತೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ಸಂಗನಗೌಡ ಪಾಟೀಲರ ಅಭಿಮಾನಿ ಬಳಗದವರು ಪ್ರಾಚೀನ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯ ಸೇರಿದಂತೆ ದೇವಸ್ಥಾನವನ್ನು ಸಿಂಗರಿಸಿದ್ದಾರೆ. ಅಲ್ಲದೆ ಅನ್ನಸಂತರ್ಪಣೆಯಂತಹ ಮಹತ್ವದ ಕಾರ್ಯವನ್ನು ಮಾಡಿದ್ದು ಸ್ವಾಗತಾರ್ಹ. ಪಟ್ಟಣದಲ್ಲಿರುವ ಎಲ್ಲ ಪ್ರಾಚೀನ ದೇವಾಲಯಗಳ ಬಗ್ಗೆ ನಾವೆಲ್ಲ ತಿಳಿದುಕೊಳ್ಳುವ ಅವಶ್ಯಕೆಯಿದೆ. ಒಳ್ಳೆಯ ಕೆಲಸಗಳಿಗೆ ಶಾಸಕ ಜಿ.ಎಸ್. ಪಾಟೀಲ ಕುಟುಂಬ ಸದಾ ಇರಲಿದೆ ಎಂದು ವಿ.ಬಿ. ಸೋಮನಕಟ್ಟಿಮಠ ಹೇಳಿದರು.



