ಪೊಲೀಸರ ಕಾರ್ಯಕ್ಕೆ ನೂತನ ಎಸ್ಪಿ ಮೆಚ್ಚುಗೆ
ವಿಜಯಸಾಕ್ಷಿ ಸುದ್ದಿ, ಗದಗ;
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ, ಮೋಸ, ವಂಚನೆ ಪ್ರಕರಣಗಳಲ್ಲಿ 74 ಪ್ರಕರಣಗಳನ್ನು ಬೇಧಿಸಿ 80 ಜನರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ಒಂದು ಕೆ.ಜಿ. 38 ಗ್ರಾಂ ಚಿನ್ನಾಭರಣಗಳು, ಸುಮಾರು ಐದು ಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳು ಸೇರಿ ಒಟ್ಟು 64,55,099 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಮಾಲೀಕರಿಗೆ ಸ್ವತ್ತುಗಳನ್ನು ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.
ಸೋಮವಾರ ಪೊಲೀಸ್ ಭವನದಲ್ಲಿ ನಡೆದ ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ಮಾಲೀಕರಿಗೆ ಹಿಂದುರಿಗಿಸುವ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2020 ನವೆಂಬರ್ 21 ರಿಂದ 2021 ಅಕ್ಟೋಬರ್ 25ರವರೆಗೆ ಒಟ್ಟು 81,28,590 ರೂ. ಕಳ್ಳತನವಾಗಿದ್ದು, 64,55,099 ರೂ. ಮೊತ್ತವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಂಬಂಧಿಸಿದ ಮಾಲೀಕರಿಗೆ ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಸುಮಾರು 33,65,685 ರೂ ಮೌಲ್ಯದ 1ಕೆ.ಜಿ.38 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಈವರೆಗೆ ಒಟ್ಟು 29,78,795 ರೂ. ಮೌಲ್ಯದ 887 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 2,65,854 ರೂ. ಮೌಲ್ಯದ 5 ಕೆ.ಜಿ. 274 ಗ್ರಾಂ ಬೆಳ್ಳಿಯ ಆಭರಣಗಳು ಕಳ್ಳತನವಾಗಿದ್ದು, ಅದರಲ್ಲಿ 2,63,664 ರೂ ಮೌಲ್ಯದ 5 ಕೆ.ಜಿ.253 ಗ್ರಾಂ ಬೆಳ್ಳಿಯ ಒಡವೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದರು.
ಅದರಂತೆ, ಒಟ್ಟು 18,16,000 ರೂ. ಮೌಲ್ಯದ 35 ವಾಹನಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 16,16,೦೦೦ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಸಿಲೆಂಡರ್, ತಾಮ್ರದ ತಂತಿ, ಮೊಬೈಲ್, ಬ್ಯಾಟರಿ, ವೆಲ್ಡಿಂಗ್ ಹಾಗೂ ಇನ್ನಿತರ ವಸ್ತುಗಳು ಸೇರಿ ಒಟ್ಟು 5,49,125 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 3,89,950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಳ್ಳತನವಾಗಿದ್ದು ಒಟ್ಟು 8,79,200 ನಗದು ಹಣದಲ್ಲಿ 2,27,200 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅ.25 ರವರೆಗೆ ಮೂರು ಮೋಸ, ವಂಚನೆ ಪ್ರಕರಣ ದಾಖಲಾಗಿದ್ದು, ಒಂಬತ್ತು ಜನರನ್ನು ಬಂಧಿಸಿ ಒಟ್ಟು 9,79,500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ಪೊಲೀಸರ ಮೇಲೆ ಸಾರ್ವಜನಿಕರು ಇಟ್ಟಿರುವ ಭರವಸೆಯನ್ನು ಉತ್ತೇಜಿಸಲು ‘ಪ್ರಾಪರ್ಟಿ ಪರೇಡ್ ನಡೆಸಲಾಗುತ್ತದೆ ಎಂದರು. ಇದೇ ವೇಳೆ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ನರಗುಂದ ಡಿಎಸ್ಪಿ ಶಂಕರ್ ರಾಗಿ, ವಿವಿಧ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳಾದ ರವಿ ಕಪ್ಪತ್ತನವರ, ಪಿ.ವಿ.ಸಾಲಿಮಠ, ಬಿ.ಜಿ.ಸುಬ್ಬಾಪುರಮಠ, ಸುಧೀರ್ಕುಮಾರ್ ಬೆಂಕಿ, ವಿಕಾಸ್ ಲಮಾಣಿ, ಸುನೀಲ್ ಸವದಿ, ಪಿಎಸ್ಐಗಳಾದ ಭಾರತಿ ತಳವಾರ, ಜಿ.ಟಿ.ಜಕ್ಕಲಿ, ರಾಜೇಶ್ ಬಟಕುರ್ಕಿ, ರೇಣುಕಾ ಮುಂಡೆವಾಡಗಿ, ಶರಣಮ್ಮ ಕವಲೂರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.