ಬೆಳಗಾವಿ:- ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆ ಆಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಕಾಟ ಕೊಡುತ್ತಿದ್ದ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜರುಗಿದೆ.
21 ವರ್ಷದ ಪತ್ನಿ ರಾಜೇಶ್ವರಿಯನ್ನು ಪತಿ ಫಕೀರಪ್ಪ ಗಿಲಕ್ಕನವರ ಕೊಲೆ ಮಾಡಿದ್ದಾನೆ. ಬಳಿಕ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಕಥೆ ಕಟ್ಟಿದ್ದ ಎನ್ನಲಾಗಿದೆ. ಮದುವೆಯಾಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಹೆಂಡತಿ ಕಾಟ ಕೊಡುತ್ತಿದ್ದಳು. ಕಿರಿಕಿರಿಗೆ ಬೇಸತ್ತಿದ್ದ ಪತಿ ಆ ದಿನ ಸಿಟ್ಟಿಗೆದ್ದು ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ಸಂಬಂಧಿಕರೆಲ್ಲರಿಗೂ ಪತ್ನಿ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಫೋನ್ ಮಾಡಿದ್ದ. ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತ ರಾಜೇಶ್ವರಿ ಕೊರಳಲ್ಲಿ ಕಾಣಿಸಿದ್ದ ಗುರುತೊಂದನ್ನು ನೋಡಿ ಅನುಮಾನ ವ್ಯಕ್ತವಾಗಿದೆ.
ತಕ್ಷಣವೇ ಪೋಷಕರು ಬೈಲಹೊಂಗಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆ ಎಂಬುದು ದೃಢವಾಗಿದೆ. ಕೂಡಲೇ ಪೊಲೀಸರು ಆರೋಪಿ ಫಕೀರಪ್ಪ ಗಿಲಕ್ಕನವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಕೊಲೆಗೈದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.



