ಚಾಮರಾಜನಗರ:- ಕೊಳ್ಳೇಗಾಲ ತಾಲ್ಲೂಕಿನ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ವರನಿಗೆ ಚಾಕು ಇರಿತ ನಡೆದ ಪ್ರಕರಣದಲ್ಲಿ ಇದೀಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.
ವರನ ಮೇಲೆ ನಡೆದ ದಾಳಿಯ ಹಿಂದಿನ ಪ್ರಮುಖ ಸೂತ್ರಧಾರಿಯೇ ವಧು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಹಾಗೂ ನಯನ ಅವರ ವಿವಾಹ ನಿಗದಿಯಾಗಿತ್ತು. ಮದುವೆಯ ಹಿಂದಿನ ದಿನ ನಡೆದ ರಿಸೆಪ್ಷನ್ ಗೆ ರವೀಶ್ ತಮ್ಮ ಸಂಬಂಧಿಕರೊಂದಿಗೆ ಕಾರಿನಲ್ಲಿ ಕಲ್ಯಾಣ ಮಂಟಪದತ್ತ ತೆರಳುತ್ತಿದ್ದಾಗ, ಮತ್ತೊಂದು ಕಾರಿನಲ್ಲಿ ಬಂದ ಆರೋಪಿಗಳು ಅವರ ವಾಹನವನ್ನು ಅಡ್ಡಗಟ್ಟಿ ಗಲಾಟೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ವಧು ನಯನಳ ಕರೆ ವಿವರಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ. ಚಾಕು ಇರಿತ ನಡೆಸಿದ ಆರೋಪಿಗಳೊಂದಿಗೆ ನಯನ ನಿರಂತರ ಸಂಪರ್ಕದಲ್ಲಿದ್ದದ್ದು ಪತ್ತೆಯಾಗಿದೆ. ಪ್ರಥಮ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಕಳೆದ ಎರಡು ವರ್ಷಗಳಿಂದ ನಯನಳೊಂದಿಗೆ ಪ್ರೀತಿಯಲ್ಲಿ ಇದ್ದನು. ಇದಾದರೂ ನಯನಗೆ ಕುಟುಂಬದವರು ಕುಣಗಳ್ಳಿ ಗ್ರಾಮದ ರವೀಶ್ ಜೊತೆ ವಿವಾಹ ನಿಶ್ಚಯಿಸಿದ್ದರು. ಮದುವೆ ನಿಲ್ಲಿಸುವ ಉದ್ದೇಶದಿಂದ ನಯನ, ರವೀಶ್ನ ಮೊಬೈಲ್ ಸಂಖ್ಯೆ ದರ್ಶನ್ಗೆ ನೀಡಿ ಬೆದರಿಕೆ ಹಾಕುವಂತೆ ಸೂಚಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇಷ್ಟವಿಲ್ಲದಿದ್ದರೂ ಕುಟುಂಬದ ಒತ್ತಡದಿಂದ ಮದುವೆಗೆ ಮುಂದಾಗಿದ್ದ ನಯನ, ಕೊನೆಯ ಪ್ರಯತ್ನವಾಗಿ ತನ್ನ ತಂಗಿಯ ಮೊಬೈಲ್ ಬಳಸಿ ದರ್ಶನ್ಗೆ ಕರೆ ಮಾಡಿ ವರನನ್ನು ಹತ್ಯೆ ಮಾಡುವಂತೆ ಹೇಳಿದ್ದಾಳೆ ಎನ್ನಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಆರೋಪಿ ದರ್ಶನ್ ಈ ಎಲ್ಲಾ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ. ಪ್ರಸ್ತುತ ನಯನ, ಆಕೆಯ ಪ್ರೇಮಿ ದರ್ಶನ್ ಹಾಗೂ ಮಿಥುನ್ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಚಾಕು ಇರಿತದ ಬಳಿಕ ಮದುವೆ ರದ್ದಾಗಿದ್ದು, ಆಸ್ಪತ್ರೆಗೆ ಓಡಿಬಂದ ನಯನ ತನಗೆ ಯಾವುದೇ ವಿಷಯ ಗೊತ್ತಿಲ್ಲ ಎಂಬಂತೆ ಕಣ್ಣೀರಿಟ್ಟಿದ್ದಳು. ರವೀಶ್ ಬಳಿ ಮದುವೆ ಮಾಡಿಕೊಳ್ಳುವಂತೆ ಬೇಡಿಕೊಂಡು, “ನೀವು ಕೈಕೊಟ್ಟರೆ ನನ್ನನ್ನು ಯಾರೂ ಮದುವೆಯಾಗುವುದಿಲ್ಲ” ಎಂದು ನಾಟಕವಾಡಿದ್ದಾಳೆ ಎಂಬುದೂ ತನಿಖೆಯಲ್ಲಿ ಬಹಿರಂಗವಾಗಿದೆ.



