ಹಾಸನದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಎದುರಿಸುತ್ತಿರುವ ನಿವೇಶನ ವಿವಾದ ಇದೀಗ ಕೇವಲ ಖಾಸಗಿ ಜಗಳವಲ್ಲ, ವ್ಯವಸ್ಥೆಯ ವೈಫಲ್ಯವನ್ನು ಬಹಿರಂಗಪಡಿಸುವ ಪ್ರಕರಣವಾಗಿ ಹೊರಹೊಮ್ಮಿದೆ.
1982ರಿಂದ 2020ರವರೆಗೆ ಸುಮಾರು 44 ವರ್ಷಗಳ ಕಾಲ ಯಾವುದೇ ತಕರಾರು ಇಲ್ಲದೇ ಹಲವು ಮಾಲೀಕರ ಮೂಲಕ ಸಾಗಿದ ನಿವೇಶನದ ಮೇಲೆ, ಇದೀಗ ಏಕಾಏಕಿ ಜಿಪಿಎ ಹೋಲ್ಡರ್ ದೇವರಾಜು ಹಕ್ಕು ಮಂಡಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಲಕ್ಷ್ಮಮ್ಮ ಎಂಬವರು ಈ ಜಾಗದ ಮಾಲೀಕರು ಎಂದು ಹೇಳಿಕೊಂಡು ದೇವರಾಜು ಜಿಪಿಎ ಪಡೆದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಪುಷ್ಪಾ ಅವರ ವಾದದ ಪ್ರಕಾರ, 2020ರಲ್ಲಿ ಕಾನೂನುಬದ್ಧವಾಗಿ ನಿವೇಶನ ಖರೀದಿ ಮಾಡಿ ಮೂರು ವರ್ಷಗಳಿಂದ ಸ್ವಾಧೀನದಲ್ಲಿದ್ದು, ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ. ಈ ನಡುವೆ ಯಶ್ ಅವರ ಹೆಸರು ಹಾಳು ಮಾಡಲು ಷಡ್ಯಂತ್ರ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ.
ದಾಖಲೆಗಳನ್ನು ಪರಿಶೀಲಿಸಿದಾಗ, ಇ-ಸ್ವತ್ತು ಮಾಡಿಸುವ ವೇಳೆ ಪಿಡಿಓ ಅಥವಾ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಬೇಕಿದ್ದರೂ, ಕಚೇರಿಯಲ್ಲೇ ಕುಳಿತು ಎರಡೆರಡು ಖಾತೆ, ಸರ್ವೆ ನಂಬರ್ ಹಾಗೂ ಇ-ಸ್ವತ್ತು ಮಾಡಿಕೊಟ್ಟಿರುವುದು ಅಧಿಕಾರಿಗಳ ಗಂಭೀರ ಲೋಪವಾಗಿದೆ ಎಂಬುದು ಸ್ಪಷ್ಟವಾಗಿದೆ.
ಸಬ್ರಿಜಿಸ್ಟರ್ ಕಚೇರಿಯಲ್ಲೇ ಮೋಸ ನಡೆದಿದೆಯೇ? ಗ್ರಾಮ ಪಂಚಾಯಿತಿಯಲ್ಲಿ ಎರಡೆರಡು ದಾಖಲೆ ಸೃಷ್ಟಿಯಾಗಿದೆಯೇ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿದ್ದು, ಈ ಪ್ರಕರಣ ಇಡೀ ಆಡಳಿತ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸಿದೆ.
ಒಟ್ಟಿನಲ್ಲಿ, ಒಂದೇ ನಿವೇಶನಕ್ಕೆ ಎರಡು ಮಾಲೀಕರು ಹಕ್ಕು ಮಂಡಿಸುತ್ತಿರುವ ಈ ಪ್ರಕರಣದ ಅಂತಿಮ ಉತ್ತರ ನ್ಯಾಯಾಲಯದ ತೀರ್ಪಿನ ಮೇಲೆಯೇ ನಿಂತಿದ್ದು, ಸರ್ಕಾರದ ಅಧಿಕಾರಿಗಳ ಯಡವಟ್ಟು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.



