ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಹೊತ್ತಲ್ಲೇ ಹಿಂದೂ ಸಮುದಾಯದ ಮೇಲೆ ಮತ್ತೊಂದು ಭೀಕರ ಹಲ್ಲೆ ನಡೆದಿದೆ.
ಮೌಲ್ವಿಬಜಾರ್ ಜಿಲ್ಲೆಯಲ್ಲಿ 28 ವರ್ಷದ ಹಿಂದೂ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆ ಕುರಿತು ತೀವ್ರ ಆತಂಕ ಉಂಟಾಗಿದೆ. ಮೃತ ಯುವಕನನ್ನು ರತನ್ ಸಾಹುಕರ್ ಎಂದು ಗುರುತಿಸಲಾಗಿದ್ದು, ಅವರು ಚಂಪಾ ಪ್ರದೇಶದ ಚಹಾ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ರತನ್ ಅವರ ಶವ ಪತ್ತೆಯಾಗಿದ್ದು, ಕೈ-ಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿತ್ತು. ದೇಹದ ಮೇಲೆ ತೀವ್ರ ಗಾಯಗಳಿದ್ದು, ಹೆಚ್ಚಿನ ರಕ್ತಸ್ರಾವವಾಗಿರುವುದು ಕಂಡುಬಂದಿದೆ. ರತನ್ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೈ-ಕಾಲುಗಳನ್ನು ಕಟ್ಟಿರುವ ವಿಧಾನ ಹಾಗೂ ಗಾಯಗಳ ಸ್ವರೂಪವೇ ಇದೊಂದು ಪಿತೂರಿಯ ಕೃತ್ಯ ಎಂಬುದನ್ನು ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಈ ಹತ್ಯೆ ಚುನಾವಣೆಗೆ ಸಂಬಂಧಿತವೇ ಅಥವಾ ಬೇರೆ ಉದ್ದೇಶವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.



