ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ತಾಲೂಕಾಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ಆಡಳಿತ ವೈದ್ಯಾಧಿಕಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇನೆಂದು ಹೇಳುತ್ತಿದ್ದಾರೆಂದು ಸಾರ್ವಜನಿಕರು ಸೋಮವಾರ ಬೆಳಿಗ್ಗೆ ತಾಲೂಕಾ ಆಸ್ಪತ್ರೆಯಲ್ಲಿ ತಮಗೆ ನೀಡಿದ ಅವಧಿ ಮೀರಿದ ಔಷಧಿ ಬಾಟಲ್ ಮತ್ತು ತಪಾಸಣಾ ಪುಸ್ತಕದಲ್ಲಿ ನಮೂದಾಗಿರುವುದನ್ನು ಪ್ರದರ್ಶಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಖಾನಾಪೂರ ಗ್ರಾಮದಲ್ಲಿನ ಆಶಾಬಿ ದೊಡ್ಡಮನಿ ಎಂಬುವರು ಮಾನಸಿಕ ಕಾಯಿಲೆ ಇದ್ದ ಬಗ್ಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವಧಿ ಮೀರಿದ ಔಷಧಿ ಸೇವನೆ ಮಾಡಿರುವುದರಿಂದ ನಿದ್ದೆ ಜಾಸ್ತಿ ಬರುತ್ತಿದ್ದು, ಮೈ-ಕೈ ನೋವು ಜಾಸ್ತಿಯಾಗುತ್ತಿದೆ. ಈ ಬಗ್ಗೆ ಕೇಳಿದರೆ ಇದನ್ನು ನಾವು ಪೂರೈಸಿಲ್ಲ ಎನ್ನುತ್ತಿದ್ದು, ಔಷಧಿ ವಿತರಿಸಿ ತಾವೇ ಸಹಿ ಮಾಡಿ ನೀಡಿದ್ದಾರೆಂದು ಆಶಾಬಿ ದೊಡ್ಡಮನಿ ಆರೋಪಿಸಿದರು.
ದಲಿತ ಮುಖಂಡ ಪ್ರಕಾಶ ಬಡೆಣ್ಣವರ, ಶಿಶಿರ ಪಾಟೀಲ ಮಾತನಾಡಿ, ಅವಧಿ ಮೀರಿದ ಔಷಧಿ ಪೂರೈಕೆ ಮಾಡಿದ್ದರ ಕುರಿತು ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದೇ ನಾವು ಔಷಧಿಯನ್ನೇ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ರೋಗಿಯ ಪುಸ್ತಕದಲ್ಲಿ ಔಷಧಿ ನೀಡಿ ಸಹಿಯನ್ನು ಸಹ ಮಾಡಿದ್ದಾರೆ. ಶಿರಹಟ್ಟಿ ಶಹರವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಇಲ್ಲಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬಂದರೂ ಅವರಿಗೆ ಸಮರ್ಪಕ ಚಿಕಿತ್ಸೆ ಲಭಿಸುತ್ತಿಲ್ಲ. ಗರ್ಭಿಣಿಯರು, ಮಕ್ಕಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಬೇರೆ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಮಾತನಾಡಿ, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ತಾಲೂಕಾಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನಾಕಾರರಿಗೆ ಮನವೊಲಿಸುವ ಪ್ರಯತ್ನವಾಗಲೀ, ಇಲ್ಲವೇ ಆರೋಪಗಳಿಗೆ ಉತ್ತರ ನೀಡಲು ಯಾರೂ ಮುಂದೆ ಬರಲಿಲ್ಲ. ಇದಕ್ಕೂ ತಮಗೆ ಸಂಬಂಧವಿಲ್ಲವೆನ್ನುವ ರೀತಿ ಕೆಲ ಸಿಬ್ಬಂದಿಗಳು ತಮ್ಮ ಪಾಡಿಗೆ ಕೆಲಸ ಮಾಡುವಲ್ಲಿ ತಲ್ಲೀನರಾಗಿರುವುದು ಕಂಡುಬಂದಿತು.
ಈ ಕುರಿತು ಪ್ರತಿಕ್ರಿಯೆ ನೀಡಲು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಗೋಪಾಲ್ರಾಜ್ ನಿರಾಕರಿಸಿದರು.



