ಗದಗ: ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಈಜಲು ಕೆರೆಯಲ್ಲಿ ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಪರಶುರಾಮ ವಡ್ಡರ ಹಾಗೂ ಬಸವರಾಜ ಬಡಿಗೇರ ಎಂಬ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ನೀರಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಪರಶುರಾಮನು ಹಮ್ಮಿಗಿ (ಮುಂಡರಗಿ ತಾಲೂಕು) ಗ್ರಾಮದ ನಿವಾಸಿಯಾಗಿದ್ದು, ಬಸವರಾಜನು ಬೆಳಧಡಿ ಗ್ರಾಮದ ಬಾಲಕನಾಗಿದ್ದಾನೆ. ಇಬ್ಬರೂ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಹಾಗೂ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದರು.

ಶಾಲೆ ಮುಗಿಸಿಕೊಂಡ ಬಳಿಕ ಆರು ವಿದ್ಯಾರ್ಥಿಗಳು ಕೆರೆಗೆ ಈಜಲು ಇಳಿದಿದ್ದು, ಈ ವೇಳೆ ಇಬ್ಬರು ಆಳವಾದ ನೀರಿನಲ್ಲಿ ಮುಳುಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 20 ಅಡಿಗೂ ಹೆಚ್ಚು ಆಳವಿರುವ ಕೆರೆಯಲ್ಲಿ ಸ್ಥಳೀಯರು, ಈಜು ತಜ್ಞರು ಹಾಗೂ ಪೊಲೀಸರು ನೀರು ಪಾಲಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಶೋಧ ನಡೆಸಿ ಸಂಜೆ ಹೊತ್ತಿಗೆ ಶವ ಹೊರ ತೆಗೆದರು.
ಘಟನೆ ಕುರಿತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಅರ್ಧ ಗಂಟೆ ಕಳೆದರೂ ಸಿಬ್ಬಂದಿ ಆಗಮಿಸಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಸತತ ನಾಲ್ಕು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಶವ ಹೊರ ತೆಗೆಯಲಾಯಿತು.
ಈ ಘಟನೆ ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



