ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮದಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಶಂಕರಗೌಡ ಕುಬೇರಗೌಡ ದ್ಯಾವನಗೌಡ್ರ (60) ಕೊಲೆಗೀಡಾದ ದುರ್ದೈವಿಯಾಗಿದ್ದು, ಪ್ರಭು ಶಂಕರಗೌಡ ದ್ಯಾವನಗೌಡ್ರ (23) ಕೊಲೆಗೈದ ಪಾಪಿ ಮಗ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯನ್ವಯ ಇವರ 2 ಎಕರೆ ಜಮೀನನ್ನು ಲೀಸ್ಗೆ ಹಾಕಿದ ಹಣದ ವಿಚಾರವಾಗಿ ತಂದೆ-ಮಗನ ನಡುವೆ ಪರಸ್ಪರ ಜಗಳವಾಗಿದೆ. ಈ ವೇಳೆ ಮಗನಿಂದ ಹಲ್ಲೆಗೊಳಗಾದ ಶಂಕರಗೌಡ ಮೃತಪಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ವ್ಯಕ್ತಿಗೆ ಪತ್ನಿ, ಪ್ರಕರಣದ ಆರೋಪಿತ ಪುತ್ರ, ಓರ್ವ ಪುತ್ರಿ ಇದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಬಿ.ವೈ. ನ್ಯಾಮಗೌಡ್ರ, ಪಿಎಸ್ಐ ನಾಗರಾಜ ಗಡದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಮೃತನ ಪತ್ನಿ ಮಗನ ವಿರುದ್ಧ ದೂರು ದಾಖಲಿಸಿದ್ದಾರೆ. ಲಕ್ಷ್ಮೇಶ್ವರದಲ್ಲಿ ಭಾನುವಾರ ನಡೆಯಲಿರುವ ಗೆಳೆಯರ ಬಳಗದ ಮಧುರ-ಮಿಲನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಶಂಕರಗೌಡನ ಬಗ್ಗೆ ಗೆಳೆಯರು ಕಂಬನಿ ಮಿಡಿದಿದ್ದಾರೆ.



