ಗದಗ: ಅಪರಾಧ ಪತ್ತೆ ಕಾರ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ ಕಾನ್ಸ್ಟೇಬಲ್ ಜಾಫರ್ ಬಚೇರಿ ಅವರು 2025ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಸುಮಾರು ಹದಿನಾಲ್ಕು ವರ್ಷಗಳಿಂದ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಜಾಫರ್ ಬಚೇರಿ ಅವರು ತಮ್ಮ ಕರ್ತವ್ಯನಿಷ್ಠೆ, ಚಾತುರ್ಯ ಹಾಗೂ ಚಾಣಾಕ್ಷ ನಿರ್ಧಾರ ಸಾಮರ್ಥ್ಯದಿಂದ ಅನೇಕ ಕ್ಲಿಷ್ಟ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚುವಲ್ಲಿ ನೆರವಾಗಿದ್ದಾರೆ.
ವಿಶೇಷವಾಗಿ ಕಳ್ಳತನ, ದರೋಡೆ ಹಾಗೂ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಅವರು ತೋರಿದ ಕಾರ್ಯಕ್ಷಮತೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನ ಸೆಳೆದಿದೆ.
ಅಪರಾಧ ಪತ್ತೆಯಲ್ಲಿನ ಸೂಕ್ಷ್ಮ ಪರಿಶೀಲನೆ, ಮಾಹಿತಿ ಸಂಗ್ರಹಣೆಯಲ್ಲಿನ ಚಾಣಾಕ್ಷತನ ಹಾಗೂ ತಂಡದೊಂದಿಗೆ ಸಮನ್ವಯ ಸಾಧಿಸುವ ಸಾಮರ್ಥ್ಯ ಇವರನ್ನು ಇತರರಿಂದ ವಿಭಿನ್ನಗೊಳಿಸಿದೆ.
ಹಲವು ಪ್ರಕರಣಗಳಲ್ಲಿ ಕಡಿಮೆ ಸಮಯದಲ್ಲೇ ಸುಳಿವುಗಳನ್ನು ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಜಾಫರ್ ಬಚೇರಿ ಅವರು ಸಾರ್ವಜನಿಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಸೇವೆಯಲ್ಲಿನ ತಮ್ಮ ಪ್ರಾಮಾಣಿಕತೆ, ಶಿಸ್ತಿನ ಪಾಲನೆ ಹಾಗೂ ಕರ್ತವ್ಯನಿಷ್ಠೆಗಾಗಿ ಜಾಫರ್ ಬಚೇರಿ ಅವರು ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗಳಿಸಿದ್ದು, ಸಹೋದ್ಯೋಗಿಗಳಿಗೂ ಪ್ರೇರಣೆಯಾಗಿ ಪರಿಣಮಿಸಿದ್ದಾರೆ. ಅವರ ಸೇವಾ ಮನೋಭಾವ ಹಾಗೂ ಪರಿಶ್ರಮವನ್ನು ಗುರುತಿಸಿ ರಾಜ್ಯ ಸರ್ಕಾರ ಈ ಗೌರವಾನ್ವಿತ ಮುಖ್ಯಮಂತ್ರಿಗಳ ಪದಕವನ್ನು ಪ್ರದಾನ ಮಾಡಿದೆ.
ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಿರೇದಳ್ಳಿ, ಮುರ್ತಾಜಾ ಖಾದ್ರಿ, ಸಜ್ಜನ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಫರ್ ಬಚೇರಿ ಅವರನ್ನು ಅಭಿನಂದಿಸಿ ಶುಭಾಶಯ ಕೋರಿದ್ದಾರೆ.
ಜಾಫರ್ ಬಚೇರಿ ಅವರ ಈ ಸಾಧನೆ ಪೊಲೀಸ್ ಇಲಾಖೆಯ ಇತರ ಸಿಬ್ಬಂದಿಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಲಿದೆ.



