ನವದೆಹಲಿ: ಅಸ್ಸಾಂ ರಾಜ್ಯದಲ್ಲಿ ಇಂದು ಏಕ ಹಂತದಲ್ಲಿ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ವಿಭಜನೆ, ಬಹಿಷ್ಕಾರ ಮತ್ತು ನಿರಾಸಕ್ತಿಯ ರಾಜಕೀಯವನ್ನು ಸೋಲಿಸಲು ಕರೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಅಸ್ಸಾಂನ ಜನರು ಏಕತೆ, ಕಲ್ಯಾಣ ಮತ್ತು ನೈಜ ಅಭಿವೃದ್ಧಿಯ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದು ಹೇಳಿದರು. ಜನರ ಮತಗಳು ಅಸ್ಸಾಂನ ಗೌರವ ಮತ್ತು ಭವಿಷ್ಯವನ್ನು ಪುನರ್ ನಿರ್ಮಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದಲ್ಲದೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಬದಲಾವಣೆಯ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂನ ಏಕತೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲಾಗಿದೆ. ರಾಜ್ಯದ ಸಾಮಾಜಿಕ ವ್ಯವಸ್ಥೆ ಹದಗೆಡಿಸಲಾಗಿದೆ. ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.
ಈಗ ಅಸ್ಸಾಂನ ಜನರು ಒಗ್ಗೂಡಿ ತಮ್ಮ ಮತದ ಶಕ್ತಿಯಿಂದ ವಿಭಜನೆ ಮತ್ತು ನಿರಾಸಕ್ತಿಯ ರಾಜಕೀಯಕ್ಕೆ ತೆರೆ ಎಳೆಯಬೇಕಾದ ಸಮಯ ಬಂದಿದೆ ಎಂದು ಹೇಳಿದರು. ಜನರು ಏಕತೆ, ಕಲ್ಯಾಣ ಮತ್ತು ನೈಜ ಅಭಿವೃದ್ಧಿಯ ದಾರಿಯನ್ನು ಆರಿಸಿಕೊಂಡರೆ, ತಮ್ಮ ಮತದ ಮೂಲಕ ರಾಜ್ಯದ ಹೆಮ್ಮೆ ಮತ್ತು ಭವಿಷ್ಯವನ್ನು ಪುನರ್ ಸ್ಥಾಪಿಸಬಹುದು ಎಂದು ತಿಳಿಸಿದರು.
ವಿಶೇಷವಾಗಿ ಮೊದಲ ಬಾರಿಗೆ ಮತದಾರರು ಸಾಮರಸ್ಯ ಮತ್ತು ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.



