ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಉಂಟಾದ ಅಸಮಾಧಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್ ಸಂಬಂಧ ಕೆಪಿಸಿಸಿ ಸಭೆಯಲ್ಲಿ ತಾವು ಏಳು ಮುಸ್ಲಿಂ ನಾಯಕರ ಹೆಸರನ್ನು ನೀಡಿದ್ದಾಗಿ ಹೇಳಿದರು. “ಯಾರಿಗಾದರೂ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲೇ ಓಪನ್ ಆಗಿ ಹೇಳಿದ್ದೆ” ಎಂದು ತಿಳಿಸಿದರು.
ಅಬ್ದುಲ್ ಜಬ್ಬಾರ್ಗೆ ಟಿಕೆಟ್ ಕೇಳಿಲ್ಲ, ಏಕೆಂದರೆ ಅವರು ಎಂಎಲ್ಸಿ ಆಗಿದ್ದಾರೆ ಎಂಬುದು ತಿಳಿದ ಬಳಿಕ ಬೇರೆ ಮುಸ್ಲಿಂ ನಾಯಕರಲ್ಲಿ ಯಾರಿಗಾದರೂ ಟಿಕೆಟ್ ನೀಡುವಂತೆ ಕೇಳಿದ್ದೆ. ಟಿಕೆಟ್ ನೀಡದಿರುವುದರಿಂದ ಅಸಮಾಧಾನ ಇದ್ದದ್ದು ನಿಜ, ಆದರೆ ಬಳಿಕ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಸಂದರ್ಭ ತಾವು ಉಪಸ್ಥಿತರಿರಲಿಲ್ಲ ಎಂದರು. ನಜೀರ್ ಅಹ್ಮದ್ ಅವರನ್ನು ಹುದ್ದೆಯಿಂದ ಕೈಬಿಟ್ಟಿರುವ ಕುರಿತು ಕಾರಣ ತಿಳಿದಿಲ್ಲ ಎಂದು ಹೇಳಿದರು.
ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಮುನ್ನಡೆಯೊಂದಿಗೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಜಮೀರ್, “ನಾನು ಸಾಮಾನ್ಯ ಕಾರ್ಯಕರ್ತ, ಜನ ಸೇವಕ ಮಾತ್ರ” ಎಂದು ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಸಚಿವರಾಗುವ ಆಸೆ ಸಹಜ ಎಂದು ಹೇಳಿದರು.

