ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಸಂಬಂಧಿಸಿದ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಗಾಳಿ-ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮತ್ತೊಂದು ದುರಂತ ಸಂಭವಿಸಿದ್ದು, ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಮನೆಯ ಮೇಲ್ಚಾವಣಿಗೆ ಗಾಳಿಯಿಂದ ಹಾರದಂತೆ ಇಡಲಾಗಿದ್ದ ಕಲ್ಲುಗಳು ಗಾಳಿಯ ತೀವ್ರತೆಗೆ ಸರಿದು ಬಿದ್ದಿದ್ದು, ಮಂಜುನಾಥ್ ಮಲಗಿದ್ದ ಸ್ಥಳದ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದರ ಜೊತೆಗೆ ನಗರದಲ್ಲಿ ಸರಣಿ ದುರಂತಗಳು ನಡೆದಿದ್ದು, ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದು ಸಂಭವಿಸಿದ ಘಟನೆ ಅತ್ಯಂತ ಭೀಕರವಾಗಿದೆ. ಈ ಘಟನೆಯಲ್ಲಿ ಮಗು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮೊಹಮ್ಮದ್ ಅಬ್ದುಲ್ (52), ಫಯಾಜ್ ಅಹ್ಮದ್ (39), ಮುಸಾವಿರ್ ಬೇಗಂ (6), ಸ್ಮಿತಾ (47), ಲತಾ (57), ನಸೀಮುಲ್ಲಾ (19) ಮತ್ತು ಸಲಾವುದ್ದೀನ್ ಅನ್ಸಾರಿ (36) ಸೇರಿದ್ದಾರೆ.
ಮಳೆಯಿಂದ ರಕ್ಷಣೆಗಾಗಿ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯಡಿ ಆಶ್ರಯ ಪಡೆದಿದ್ದವರ ಮೇಲೆ ಗೋಡೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ಯಾರಬ್ ನಗರ ಪ್ರದೇಶದಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಬೈಕ್ ಪಾರ್ಕ್ ಮಾಡುವ ವೇಳೆ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಹರಿದು ಈ ದುರಂತ ಸಂಭವಿಸಿದೆ.
ಇದೇ ರೀತಿಯಲ್ಲಿ ಜೆ.ಪಿ. ನಗರ ವ್ಯಾಪ್ತಿಯ ಮಿನಿ ಫಾರೆಸ್ಟ್ 15ನೇ ಕ್ರಾಸ್ ಬಳಿ ನಡೆದ ಮತ್ತೊಂದು ಘಟನೆಯಲ್ಲಿ ರಘು ಎಂಬ 30-35 ವರ್ಷದ ವ್ಯಕ್ತಿ ವಿದ್ಯುತ್ ಕಂಬದ ಬಳಿ ಬಿದ್ದಿದ್ದ ತಂತಿಗೆ ತಗುಲಿ ಸಾವನ್ನಪ್ಪಿದ್ದಾರೆ.
ನಗರದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಈ ಅವಘಡಗಳಿಂದ ನಾಗರಿಕರು ಆತಂಕಗೊಂಡಿದ್ದು, ಮಳೆಗಾಲದ ಸುರಕ್ಷತಾ ಕ್ರಮಗಳನ್ನು ತಕ್ಷಣ ಬಲಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.



