ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿ ನಡೆದಿದ್ದ ಆನೆಗಳ ಕಾದಾಟ ಭೀಕರ ದುರಂತಕ್ಕೆ ತಿರುಗಿದೆ. ಕಾದಾಟದ ವೇಳೆ ಚೆನ್ನೈ ಮೂಲದ ಮಹಿಳೆ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಕೂಡ ಇಂದು ಸಾವನ್ನಪ್ಪಿದೆ.
ನಿನ್ನೆ ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಕರೆತರಲಾಗಿದ್ದ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಏಕಾಏಕಿ ಕಾದಾಟ ಆರಂಭವಾಗಿತ್ತು. ಕಂಜನ್ ಆನೆ ದಂತದಿಂದ ತಿವಿದ ಪರಿಣಾಮ ಮಾರ್ತಾಂಡ ನೆಲಕ್ಕುರುಳಿತ್ತು. ಮಾವುತರು ನಿಯಂತ್ರಿಸಲು ಹರಸಾಹಸ ಪಟ್ಟರೂ ಕಂಜನ್ ಆನೆ ಮದವೇರಿದಂತೆ ವರ್ತಿಸುತ್ತಿತ್ತು.
ಈ ವೇಳೆ ಆನೆಗಳ ನಡುವೆ ಸಿಲುಕಿದ್ದ ಚೆನ್ನೈ ಮೂಲದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ವೇಳೆ ಮಹಿಳೆಯ ಪತಿ ಹಾಗೂ ಮಗು ಅದೃಷ್ಟವಶಾತ್ ಪಾರಾಗಿದ್ದರು.
ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ಶಿಬಿರದಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರು ಕನಿಷ್ಠ 100 ಅಡಿ ದೂರದಿಂದಲೇ ಆನೆಗಳನ್ನು ವೀಕ್ಷಿಸಬೇಕು ಎಂದು ಆದೇಶಿಸಲಾಗಿದೆ.
ಆನೆಗಳ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು, ಮೈತೊಳೆಯುವುದು, ಆಹಾರ ನೀಡುವುದು ಸೇರಿದಂತೆ ಯಾವುದೇ ನೇರ ಸಂಪರ್ಕಕ್ಕೂ ಅವಕಾಶ ಇರಬಾರದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.



