ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಸುರಿದ ಗಾಳಿ-ಮಳೆಗೆ ತೋಟಗಾರಿಕೆ ಬೆಳೆಗಳು ಭಾರೀ ಹಾನಿಗೀಡಾಗಿದ್ದು, ಮಾವು, ಬಾಳೆ ಸೇರಿದಂತೆ ಹಲವು ಬೆಳೆಗಳ ನಷ್ಟವನ್ನು ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕ ಪ್ರಶಾಂತ ಕುಲಕರ್ಣಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಲಕ್ಷ್ಮೇಶ್ವರದ ಮಾವು ಬೆಳೆಗಾರ ನಿಂಗಪ್ಪ ಪೂಜಾರ ಹಾಗೂ ಸಹೋದರರ ಮಾವಿನ ತೋಟಕ್ಕೆ ಭೇಟಿ ನೀಡಿದ ವೇಳೆ, ಫಲಭರಿತ ಗಿಡಗಳಲ್ಲಿದ್ದ ಮಾವಿನ ಹಣ್ಣುಗಳು ಗಾಳಿಯ ಅಬ್ಬರಕ್ಕೆ ನೆಲಕ್ಕುರುಳಿದ ದೃಶ್ಯ ಕಂಡು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯ ಸಿಬ್ಬಂದಿಯೂ ಸ್ಥಳದಲ್ಲೇ ಹಾನಿಯ ಪ್ರಮಾಣದ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ತಮ್ಮ ಅಳಲನ್ನು ತೋಡಿಕೊಂಡ ರೈತ ನಿಂಗಪ್ಪ ಪೂಜಾರ, “ಈ ವರ್ಷದ ತೀವ್ರ ಬಿಸಿಲಿನ ನಡುವೆಯೂ ಅತ್ಯಂತ ಕಾಳಜಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾವಿನ ತೋಟ ಬೆಳೆಸಿದ್ದೇವೆ. ಆದರೆ ಗಾಳಿ-ಮಳೆಗೆ ಗಿಡದಲ್ಲಿದ್ದ ಫಸಲೆಲ್ಲ ನೆಲಕ್ಕುರುಳಿದೆ. ಮೊದಲೇ ಉತ್ತಮ ಗುಣಮಟ್ಟದ ಹಣ್ಣಿನ ದರ ಕುಸಿದಿದ್ದು, ಈಗ ನೆಲಕ್ಕೆ ಬಿದ್ದ ಹಣ್ಣನ್ನು ಕೇಳುವವರೇ ಇಲ್ಲ. ಬದುಕಿಗೆ ಆಸರೆಯಾಗಿದ್ದ ಬೆಳೆಯೇ ಹಾಳಾಗಿದ್ದು ದಿಕ್ಕು ತೋಚದಂತಾಗಿದೆ” ಎಂದು ಕಣ್ಣೀರಿಟ್ಟರು.
ಪರಿಶೀಲನೆ ಬಳಿಕ ಮಾತನಾಡಿದ ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕ ಪ್ರಶಾಂತ ಕುಲಕರ್ಣಿ, “ಲಕ್ಷ್ಮೇಶ್ವರ ಸೇರಿದಂತೆ ತಾಲೂಕಿನ ಕೆಲ ಗ್ರಾಮೀಣ ಭಾಗಗಳಲ್ಲಿ ತೋಟಗಾರಿಕೆ ಬೆಳೆಗಳು ಗಾಳಿ-ಮಳೆಯಿಂದ ಹಾನಿಗೀಡಾಗಿರುವ ಮಾಹಿತಿ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕಂದಾಯ ಹಾಗೂ ತೋಟಗಾರಿಕಾ ಇಲಾಖೆಯಿಂದ ಹಾನಿಯ ಪ್ರಮಾಣ ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು, ಕಂದಾಯ ಇಲಾಖೆಯ ಸಿಬ್ಬಂದಿ ಶ್ರೀಕಾಂತ ನವಲೆ ಉಪಸ್ಥಿತರಿದ್ದರು.
“ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡುವ ಮೂಲಕ ರೈತರ ಬದುಕಿಗೆ ಸರ್ಕಾರ ಆಸರೆಯಾಗಬೇಕು”
ನಿಂಗಪ್ಪ ಪೂಜಾರ ಹಾಗೂ ಸಹೋದರರು ನೀಲಪ್ಪ, ನಾಗಪ್ಪ, ಶಿವಪ್ಪ, ದೇವಪ್ಪ



