ಬೆಂಗಳೂರು: ನ್ಯಾಯಸಮ್ಮತವಾಗಿ ನಡೆಯಬೇಕಾದ ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ, ಜೆಡಿಎಸ್ ನಿಯೋಗದಿಂದ ದೂರು ಸಲ್ಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಎಸ್ಐಆರ್ನಲ್ಲಿ ಅಕ್ರಮ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟಿಸಿ ಮನವಿ ನೀಡಲಾಗಿದೆ ಎಂದರು.
ಅಕ್ರಮವಾಗಿ ವಾಟ್ಸ್ ಅಪ್ ಗ್ರೂಪ್ ರಚನೆ…
ಎಸ್ಐಆರ್ ಸಂಬಂಧ ಅಕ್ರಮವಾಗಿ ವಾಟ್ಸ್ ಅಪ್ ಗ್ರೂಪ್ ಮಾಡಿ ಮಾಹಿತಿ ರವಾನೆ ಮಾಡಲಾಗುತ್ತಿದೆ. ತಮಗೆ ಬೇಕಾದ ಪ್ರದೇಶ, ಮದರಸಾ ಹಾಗೂ ಮಸೀದಿಗಳಲ್ಲಿ ಎಸ್ಐಆರ್ ನಡೆಸಲಾಗುತ್ತಿದೆ. ಬಹುತೇಕ ಕಡೆ ಹಿಂದಿನ ಚುನಾವಣಾ ಪ್ರತಿನಿಧಿಗಳ ಮನೆಯಲ್ಲಿ ಒಂದೇ ಒಂದು ಸಮುದಾಯ ವಿಶೇಷವಾಗಿ ಮುಸ್ಲಿಂ ಮುಖಂಡರ ಕೈಲಿ ಓಣಿಯಲ್ಲಿ ಹಾಗೂ ಬೂತ್ ನಲ್ಲಿ ಅವರೇ ಹೋಗಿ ಎಸ್ಐಆರ್ ಮಾಡಿಕೊಂಡು ಬರುವ ಹಾಗೆ ಮಾಡಲಾಗುತ್ತಿದೆ. ಬಿಎಲ್ಎಗಳಿಗೆ ಬಿಎಲ್ಒಗಳು ಮಾಹಿತಿ ನೀಡುತ್ತಿಲ್ಲ. ಅನೇಕ ಕಡೆ ಮಾಹಿತಿ ನೀಡಲು ಆಗಲ್ಲ ಅಂತ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮೊದಲು ನಾವು ಬೇರೆ ಬೇರೆ ವೇಳೆ ದೂರು ನೀಡಿದ್ದೇವೆ. ಈಗ ಉನ್ನತ ಮಟ್ಟದ ನಿಯೋಗದಿಂದ ದೂರು ನೀಡಿ ತೀವ್ರ ಆಗ್ರಹ ಮಾಡಿದ್ದೇವೆ. ಆದರೂ ಯಾವುದೇ ಕ್ರಮ ಆಗಿಲ್ಲ. ಸ್ಥಳೀಯ ಶಾಸಕರ ಚಿತ್ರವನ್ನು ಬಿಎಲ್ಒಗಳೇ ಹಾಕಿ ಪ್ರಚಾರ ಮಾಡ್ತ ಇದ್ದಾರೆ. ಇಂತಹವರ ವಿರುದ್ಧ ಕ್ರಮವಾಗಬೇಕು. ಎಲ್ಲೆಲ್ಲಿ ಅಕ್ರಮವಾಗಿ ಎಸ್ಐಆರ್ ಆಗಿದೆ ಅದನ್ನು ರದ್ದು ಮಾಡಿ ಮತ್ತೆ ಎಸ್ಐಆರ್ ಆಗಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾ ನುಸುಳುಕೋರರನ್ನು ಸೇರಿಸುವ ಹುನ್ನಾರ…
ಎಸ್ಐಆರ್ ಉದ್ದೇಶವನ್ನು ಬದಿಗಿಟ್ಟು ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ಮತಪಟ್ಟಿಗೆ ಸೇರಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ನಂತರ ರಾಜ್ಯಕ್ಕೆ ಓಡಿ ಬಂದ ಬಾಂಗ್ಲಾದೇಶದವರನ್ನು ಇಲ್ಲಿ ಸೇರಿಸುವ ಸಂಚು ಮಾಡಲಾಗುತ್ತಿದೆ ಎಂದರು.
ಎಸ್ಐಆರ್ ನಲ್ಲಿ ಮ್ಯಾಪಿಂಗ್ ಮಾಡುವಾಗ ತಂದೆ ತಾಯಿ ಹೀಗೆ ಕೆಲವರ ಸಂಬಂಧ ಮಾತ್ರ ಇರಬೇಕು. ಆದರೆ ಬೇರೆ ಬೇರೆ ಸಂಬಂಧಿಗಳನ್ನು ಸೇರಿಸಲಾಗುತ್ತಿದೆ. ಇದು ನಡೆಯಬಾರದು. ಮೋಸದಿಂದ ಎಸ್ಐಆರ್ ನಡೆದರೆ ದೇಶದ ಭದ್ರತೆಗೆ ಧಕ್ಕೆಯಾಗಲಿದೆ. ಎಸ್ಐಆರ್ನಲ್ಲಿ ಹೆಸರು ತೆಗೆದುಹಾಕಿದರೆ ಗ್ಯಾರಂಟಿ ಕೊಡಲ್ಲ ಅಂತ ಮುಖ್ಯಮಂತ್ರಿಗಳು ಬೇಕೆಂತಲೇ ಹೇಳಿದ್ದಾರೆ. ಇದರ ಉದ್ದೇಶ ಏನು ಎಂದು ತಿಳಿಯಬೇಕು. ಇದನ್ನು ಈಗ ಏಕೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಜನರನ್ನು ಹಿಂಡು ಹಿಂಡಾಗಿ ಸೇರಿಸಿ ಅರ್ಜಿ ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಲ್ಲದೆ ಜಿಬಿಎಯ ಕೆಲವು ವಾರ್ಡ್ಗಳಲ್ಲಿ ಸಮಾನಾಂತರ ಎಸ್ಐಆರ್ ಅನ್ನು ಸಹ ನಡೆಸಲಾಗುತ್ತಿದೆ. ಇದು ನಿಲ್ಲಬೇಕು ಎಂದರು. ಚುನಾವಣಾ ಆಯೋಗ ಕತ್ತೆ ಕಾಯುತ್ತಿಲ್ಲ. ಕತ್ತೆ ಕಾಯಲು ಯೋಗ್ಯತೆ ಇಲ್ಲದ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಎಸ್ಐಆರ್ ಅನ್ನು ಬುಡಮೇಲು ಮಾಡುತ್ತಿದೆ ಎಂದು ದೂರಿದರು.



