ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮೊನ್ನೆ ಎರಡು ಗುಂಪಗಳ ಮಧ್ಯೆ ನಡೆದ ಗಲಾಟೆಯ ಪರಿಣಾಮವಾಗಿ, ಒಂದು ಕೋಮಿನ ಯುವಕರು ಸೋಮವಾರ ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನರಗುಂದ ಪಟ್ಟಣದ ಸಿದ್ದನಬಾವಿ ಓಣಿಯ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯಾ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನಪ್ಪ ಚಂದ್ರಶೇಖರ ಅಕ್ಕಿ, ವಾಸವಿ ಕಲ್ಯಾಣ ಮಂಟಪ ಹತ್ತಿರದ ನಿವಾಸಿ ಕೂಲಿ ಕೆಲಸಗಾರ ಸಕ್ರಪ್ಪ ಹನಮಂತಪ್ಪ ಕಾಕನೂರ, ಸುಬೇದಾರ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೋಮವಾರ ಸಂಜೆ ಪಟ್ಟಣದ ಪುರಸಭೆಯ ಹತ್ತಿರ ಪ್ರವೀಣ ಹಾಗೂ ಮಲ್ಲಿಕಾರ್ಜುನ ಹಿರೇಮಠ ಎಂಬ ಯುವಕರೊಟ್ಟಿಗೆ ೭-೮ ಜನರು ಸೇರಿ ಕಳೆದ ಎರಡು ತಿಂಗಳ ಹಿಂದಿನಿಂದ ನಡೆಯುತ್ತಿದ್ದ ಗಲಾಟೆಗೆ ಸಬಂಧಿಸಿದಂತೆ ಹಳೇ ದ್ವೇಷವಿಟ್ಟುಕೊಂಡು
ಶಮೀರ ಸುಬಾನಸಾಬ ಶಹಪುರ ಹಾಗೂ ಶಮಸೀರಖಾನ್ ನಾಶೀರಖಾನ ಪಠಾಣ ಎಂಬುವವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಶಮೀರ್ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ನರಗುಂದ ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ತನಿಖೆ ಕೈಗೊಂಡಿದ್ದಾರೆ.