ಬಳ್ಳಾರಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಅವಮಾನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಿದ ನಾಯಕರೊಂದಿಗೆ ಗೌರವಯುತವಾಗಿ ವರ್ತಿಸಬೇಕಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡಿ, ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.
“2023ರಲ್ಲಿ ಮುಖ್ಯಮಂತ್ರಿ ಆದ ದಿನದಿಂದಲೇ ಅವರನ್ನು ಗುರಿಯಾಗಿಸಿಕೊಂಡು ಒಳಗೊಳಗೆ ರಾಜಕೀಯ ನಡೆಯುತ್ತಿತ್ತು. ಕೊನೆಗೆ ಕ್ಲೈಮ್ಯಾಕ್ಸ್ ಹಂತದಲ್ಲಿ ರಾಜೀನಾಮೆ ಕೊಡಿಸಲಾಯಿತು. ಸಿದ್ದರಾಮಯ್ಯ ಅವರ ಮುಖದಲ್ಲಿದ್ದ ನೋವು ನೋಡಿದಾಗ ನನಗೂ ಬೇಸರವಾಯಿತು” ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಶ್ರೀರಾಮುಲು, “ಒಂದು ಕಡೆ ಡಿ.ಕೆ. ಶಿವಕುಮಾರ್ ಕಾಲೆಳೆದರೆ, ಮತ್ತೊಂದು ಕಡೆ ಖರ್ಗೆ ಕಾಲೆಳೆದರು. ಮುಖ್ಯಮಂತ್ರಿ ಕುರ್ಚಿಯನ್ನು ಎಳೆದಾಡಿ ಸಿದ್ದರಾಮಯ್ಯರಿಂದ ಕಸಿದುಕೊಂಡಿದ್ದಾರೆ” ಎಂದು ಆರೋಪಿಸಿದರು.
“ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಪಕ್ಷವೇ ನೋವುಂಟು ಮಾಡಿದೆ. ರಾಹುಲ್ ಗಾಂಧಿ ಸದಾ ಒಬಿಸಿ ನಾಯಕರ ಬೆಂಬಲದ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಪ್ರಮುಖ ರಾಜ್ಯದ ಒಬಿಸಿ ನಾಯಕನನ್ನು ಕೆಳಗಿಳಿಸಿರುವುದಕ್ಕೆ ಏನು ಉತ್ತರ ಕೊಡುತ್ತಾರೆ?” ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದ ಬೆಂಬಲವಿದೆ ಎಂದು ಹೇಳಿದ ಅವರು, “ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡೇ ಹಲವರು ಶಾಸಕರಾಗಿ ಗೆದ್ದಿದ್ದಾರೆ. ಅವರ ಹೆಸರಿನಿಂದಲೇ ಕಾಂಗ್ರೆಸ್ ಈ ಹಂತಕ್ಕೆ ಬಂದಿದೆ. ಆದರೆ ಈಗ ಅದೇ ನಾಯಕರು ಡಿ.ಕೆ. ಶಿವಕುಮಾರ್ ಮನೆ ಮುಂದೆ ನಿಂತಿದ್ದಾರೆ” ಎಂದು ಟೀಕಿಸಿದರು.



