ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರೋಹಿಣಿ ಮಳೆ ಈಗಾಗಲೇ ಬಿತ್ತನೆಯಾಗಿದ್ದ ಹೆಸರು ಹಾಗೂ ಅಲಸಂದೆ ಬೆಳೆಗೆ ಹೊಸ ಜೀವ ತುಂಬಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.
ರೋಹಿಣಿ ಮಳೆ ಆರಂಭವಾದ ಬೆನ್ನಲ್ಲೇ ಅಲ್ಪ ತೇವಾಂಶದಲ್ಲೇ ರೈತರು ಹೆಸರು ಮತ್ತು ಅಲಸಂದೆ ಬಿತ್ತನೆ ಮಾಡಿದ್ದರು. ಆದರೆ ಕೆಲ ದಿನ ಮಳೆ ಕೈಕೊಟ್ಟ ಪರಿಣಾಮ ಬೆಳೆ ಒಣಗುವ ಆತಂಕ ರೈತರನ್ನು ಕಾಡುತ್ತಿತ್ತು. ಇದೀಗ ಮಂಗಳವಾರ ಸಂಜೆ ಹಾಗೂ ಬುಧವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆ ರೈತಾಪಿ ವರ್ಗಕ್ಕೆ ಹೊಸ ಭರವಸೆ ನೀಡಿದೆ.
ನರೇಗಲ್ಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ತೊಂಡಿಹಾಳ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಕಂಡು ಬಂದಿದೆ. ಮಳೆಯಿಂದ ನರೇಗಲ್ಲದ ಗಡ್ಡಿ ಹಳ್ಳ ತುಂಬಿ ರಭಸದಿಂದ ಹರಿಯುತ್ತಿದ್ದು, ಹಳ್ಳದ ಈ ದೃಶ್ಯವನ್ನು ಕಂಡು ಜನತೆ ಹರ್ಷ ವ್ಯಕ್ತಪಡಿಸಿದರು.
“ಇತ್ತೀಚಿನ ವರ್ಷಗಳಲ್ಲಿ ಗಡ್ಡಿ ಹಳ್ಳ ಇಷ್ಟು ರಭಸವಾಗಿ ಹರಿದದ್ದು ನೋಡಿಲ್ಲ” ಎಂದು ರೈತರು ಸಂತಸ ಹಂಚಿಕೊಂಡರು.
ಜೋಡು ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ
ಇದೇ ವೇಳೆ ಪಟ್ಟಣದ ಕೃಷಿ ಕೇಂದ್ರದ ಬಳಿಯ ಜೋಡು ರಸ್ತೆಯಲ್ಲಿ ಮಳೆ ನೀರು ಜಮಾವಣೆಗೊಂಡು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಜೋಡು ರಸ್ತೆಯ ಆರಂಭದಲ್ಲಿರುವ ದೊಡ್ಡ ತಗ್ಗು ಮಳೆ ನೀರಿನಿಂದ ಮುಚ್ಚಿಹೋಗಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು ಹಾಗೂ ತಗ್ಗನ್ನು ಮುಚ್ಚಬೇಕು. ಇಲ್ಲವಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.



