ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ರಾಜಕಾರಣಿ ಎಚ್. ಕೆ. ಪಾಟೀಲ ಅವರನ್ನು ಸಚಿವ ಸಂಪುಟದಲ್ಲಿ ಸಮರ್ಪಕವಾಗಿ ಪರಿಗಣಿಸದಿರುವುದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಅಂಜುಮನ್-ಎ-ಇಸ್ಲಾಂ ಸಂಸ್ಥೆ ಸದಸ್ಯ ಆಸೀಫ್ ಜಿ. ದಂಡಿನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರಾಜಕೀಯದಲ್ಲಿ ಸ್ವಚ್ಛ ರಾಜಕಾರಣ, ಆಡಳಿತಾತ್ಮಕ ಅನುಭವ ಹಾಗೂ ಜನಪರ ಬದ್ಧತೆಗೆ ಹೆಸರಾಗಿರುವ ಎಚ್.ಕೆ. ಪಾಟೀಲ ಅವರನ್ನು ಸಚಿವ ಸಂಪುಟ ರಚನೆ ವೇಳೆ ಕಡೆಗಣಿಸಿರುವುದು ಉತ್ತರ ಕರ್ನಾಟಕದ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ ಎಂದು ತಿಳಿಸಿದ್ದಾರೆ.
ದಶಕಗಳ ಕಾಲ ಶಾಸಕರಾಗಿ ಹಾಗೂ ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿರುವ ಎಚ್.ಕೆ. ಪಾಟೀಲ ಅವರು ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ದೇಶದ ಗಮನ ಸೆಳೆದಿತ್ತು ಎಂದು ಉಲ್ಲೇಖಿಸಿದರು.
ಎಚ್.ಕೆ. ಪಾಟೀಲ ಅವರು ಉತ್ತರ ಕರ್ನಾಟಕದ ಧ್ವನಿಯಾಗಿ, ರೈತರ ಹಿತಾಸಕ್ತಿಗಳ ಪರ ಹೋರಾಟಗಾರರಾಗಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಪ್ರತಿಪಾದಿಸಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಅನುಭವ ಹಾಗೂ ಸಾಮರ್ಥ್ಯ ರಾಜ್ಯದ ಅಭಿವೃದ್ಧಿಗೆ ಅಮೂಲ್ಯ ಸಂಪತ್ತಾಗಿದೆ ಎಂದು ಹೇಳಿದರು.
ರಾಜ್ಯ ಆಡಳಿತದಲ್ಲಿ ಪ್ರಾದೇಶಿಕ ಸಮತೋಲನ, ಅನುಭವ ಹಾಗೂ ಜನಪ್ರತಿನಿಧಿತ್ವಕ್ಕೆ ಸೂಕ್ತ ಗೌರವ ದೊರೆಯಬೇಕು. ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಜನರ ಭಾವನೆಗಳನ್ನು ಗೌರವಿಸಿ ಎಚ್.ಕೆ. ಪಾಟೀಲ ಅವರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
“ಎಚ್.ಕೆ. ಪಾಟೀಲರಂತಹ ಹಿರಿಯ ನಾಯಕರು ಸರ್ಕಾರದ ಬಲ. ಅವರ ಅನುಭವಕ್ಕೆ ಸೂಕ್ತ ಸ್ಥಾನ ದೊರೆತಾಗ ಮಾತ್ರ ಆಡಳಿತ ಇನ್ನಷ್ಟು ಸಮರ್ಥವಾಗಲಿದೆ.”
ಆಸೀಫ್ ಜಿ. ದಂಡಿನ
ಸದಸ್ಯ, ಅಂಜುಮನ್-ಎ-ಇಸ್ಲಾಂ ಸಂಸ್ಥೆ ಗದಗ-ಬೆಟಗೇರಿ



