ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನ ಪ್ರವೇಶಿಸುವಾಗ ಕೆಲವು ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ.
ಪಾದರಕ್ಷೆಗಳನ್ನು ಹೊರಗಿಡುವುದು, ಕೈಕಾಲು ತೊಳೆದುಕೊಳ್ಳುವುದು, ಕೆಲವಡೆ ತಲೆ ಮುಚ್ಚಿಕೊಳ್ಳುವುದು ಸೇರಿದಂತೆ ದೇವಸ್ಥಾನದ ಮೊದಲ ಮೆಟ್ಟಿಲನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವ ಆಚರಣೆ ಕೂಡ ಪ್ರಮುಖವಾಗಿದೆ. ಈ ಸಂಪ್ರದಾಯವು ಕೇವಲ ಆಚರಣೆಯಲ್ಲ, ಅದರ ಹಿಂದೆ ಆಳವಾದ ಆಧ್ಯಾತ್ಮಿಕ ನಂಬಿಕೆ ಅಡಗಿದೆ.
ಹಿಂದೂ ಧರ್ಮದ ಪ್ರಕಾರ ದೇವಸ್ಥಾನವು ದೈವಿಕ ಶಕ್ತಿ ಮತ್ತು ಧನಾತ್ಮಕ ಕಂಪನಗಳಿಂದ ಕೂಡಿದ ಪವಿತ್ರ ಕ್ಷೇತ್ರವಾಗಿದೆ. ದೇವಸ್ಥಾನ ಪ್ರವೇಶಿಸುವ ಮುನ್ನ ಮೊದಲ ಮೆಟ್ಟಿಲಿಗೆ ನಮಸ್ಕರಿಸುವುದು ದೇವರ ಸನ್ನಿಧಿಗೆ ಗೌರವ ಸಲ್ಲಿಸುವ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ದೇವಸ್ಥಾನದ ಮೊದಲ ಮೆಟ್ಟಿಲು ಭಗವಂತನ ಪಾದಕ್ಕೆ ಸಮಾನವಾಗಿದೆ. ಹೀಗಾಗಿ ಅದನ್ನು ಸ್ಪರ್ಶಿಸಿ ಕಣ್ಣಿಗೆ ಒತ್ತಿಕೊಳ್ಳುವ ಮೂಲಕ ಭಕ್ತರು ದೈವಿಕ ಶಕ್ತಿಗೆ ಗೌರವ ಸಲ್ಲಿಸುತ್ತಾರೆ. ಜೊತೆಗೆ ತಮ್ಮೊಳಗಿನ ಅಹಂಕಾರ, ಕೋಪ, ಮತ್ಸರ ಮತ್ತು ನಕಾರಾತ್ಮಕ ಭಾವನೆಗಳನ್ನು ತ್ಯಜಿಸಿ ಶುದ್ಧ ಮನಸ್ಸಿನಿಂದ ದೇವರ ದರ್ಶನಕ್ಕೆ ಸಿದ್ಧರಾಗುತ್ತಾರೆ ಎಂಬ ನಂಬಿಕೆಯಿದೆ.
ಈ ಆಚರಣೆಯು ಸಂಪೂರ್ಣ ಶರಣಾಗತಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಇದು ವ್ಯಕ್ತಪಡಿಸುತ್ತದೆ. ಆದ್ದರಿಂದ ಭಕ್ತರು ಮೆಟ್ಟಿಲಿಗೆ ನಮಸ್ಕರಿಸಿ ದೇವಾಲಯ ಪ್ರವೇಶಿಸುತ್ತಾರೆ.
ಇನ್ನು ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹೊರಬಂದ ನಂತರ ಕೆಲಕಾಲ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಸಂಪ್ರದಾಯವೂ ಇದೆ. ಶಾಸ್ತ್ರಗಳ ಪ್ರಕಾರ ದೇವಸ್ಥಾನದ ಶಿಖರವನ್ನು ದೇವರ ಮುಖವೆಂದೂ, ಮೆಟ್ಟಿಲುಗಳನ್ನು ದೇವರ ಪಾದ ಕಮಲಗಳೆಂದೂ ಪರಿಗಣಿಸಲಾಗುತ್ತದೆ. ಹೀಗಾಗಿ ದೇವರ ದರ್ಶನದ ಬಳಿಕ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದರಿಂದ ದೇವಸ್ಥಾನದ ಗರ್ಭಗುಡಿಯಿಂದ ಹೊರಹೊಮ್ಮುವ ಧನಾತ್ಮಕ ಶಕ್ತಿ ಮತ್ತು ದೈವಿಕ ತರಂಗಗಳು ದೇಹ ಹಾಗೂ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ.
ಆದಾಗ್ಯೂ, ಇವು ಧಾರ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳ ಆಧಾರದ ಮೇಲಿರುವ ಆಚರಣೆಗಳಾಗಿದ್ದು, ಅವುಗಳ ಆಧ್ಯಾತ್ಮಿಕ ಮಹತ್ವವನ್ನು ಭಕ್ತರು ತಮ್ಮ ನಂಬಿಕೆಗಳ ಪ್ರಕಾರ ಅನುಸರಿಸುತ್ತಾರೆ.



