Home Gadag News ತ್ಯಾಗದ ನೆನಪು… ಸೌಹಾರ್ದದ ಸಂಭ್ರಮ!

ತ್ಯಾಗದ ನೆನಪು… ಸೌಹಾರ್ದದ ಸಂಭ್ರಮ!

0
ತ್ಯಾಗದ ನೆನಪು… ಸೌಹಾರ್ದದ ಸಂಭ್ರಮ!
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಹಸನ್ ಮತ್ತು ಹಜರತ್ ಹುಸೈನ್ ಅವರ ತ್ಯಾಗ, ಬಲಿದಾನ ಹಾಗೂ ನ್ಯಾಯಕ್ಕಾಗಿ ನಡೆದ ಹೋರಾಟವನ್ನು ಸ್ಮರಿಸುವ ಮೊಹರಂ ಹಬ್ಬವನ್ನು ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧೆ, ಭಕ್ತಿ ಹಾಗೂ ಧಾರ್ಮಿಕ ಸೌಹಾರ್ದದ ವಾತಾವರಣದಲ್ಲಿ ಆಚರಿಸಲಾಯಿತು.

ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಪುಷ್ಪಾಲಂಕೃತ ಪಾಂಜಾಗಳು, ಡೋಲಿಗಳು ಹಾಗೂ ಅಲಾಯಿ ದೇವರುಗಳ ಭವ್ಯ ಮೆರವಣಿಗೆಗಳು ಜನರ ಗಮನ ಸೆಳೆದವು. ಹಬ್ಬದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಜಾತಿ–ಧರ್ಮದ ಬೇಧ ಮರೆತು ಒಂದಾಗಿ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.

ಗದಗ ನಗರದಲ್ಲಿ ಮಾಬುಸುಬಾನಿ ಕಟ್ಟೆ, ಜಾಮೀಯಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್‌ತೋಟ, ಮುಕ್ತುಮ್ ಗರಡಿ, ಹಳೇ ಕಚೇರಿ, ಹನುಮಂತ ಗರಡಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಪಾಂಜಾ ದೇವರು ಹಾಗೂ ಡೋಲಿಗಳ ಮೆರವಣಿಗೆಗಳು ಶ್ರದ್ಧಾಭಕ್ತಿಯಿಂದ ನಡೆದವು. ನಗರದ ಕಾಗದಗೇರಿ ಓಣಿಯ ಬಾವಿ ಹಾಗೂ ಮುಕ್ತುಮ್ ಬಾವಡಿಯಲ್ಲಿ ಹತ್ತಾರು ಪವಿತ್ರ ತಾಬೂತ್‌ಗಳು ಸೇರಿ, ಬಳಿಕ ಸಂಪ್ರದಾಯದಂತೆ ಹೊಳೆಗೆ ಕಳುಹಿಸಲಾಯಿತು.

ಲಕ್ಷ್ಮೇಶ್ವರ ಪಟ್ಟಣದಲ್ಲಿ 12 ಮಸೀದಿಗಳ ಪಾಂಜಾಗಳು ಮುಖ್ಯ ಬಜಾರ್ ರಸ್ತೆ, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ ಹಾಗೂ ಶಿಗ್ಲಿ ಕ್ರಾಸ್ ಮೂಲಕ ಛೋಟೆ ಲಂಕಾಪತಿ ಮಸೀದಿವರೆಗೆ ಮೆರವಣಿಗೆ ನಡೆಸಿ ನಂತರ ತಮ್ಮ ಮೂಲ ಸ್ಥಳಗಳಿಗೆ ಮರಳಿದವು. ಸಂಜೆ ಸಂಪ್ರದಾಯದಂತೆ ಪಾಂಜಾಗಳನ್ನು ಹೊಳೆಗೆ ಕೊಂಡೊಯ್ಯಲಾಯಿತು.

ಶಿಗ್ಲಿ, ರಾಮಗೇರಿ, ಸೂರಣಗಿ, ಬಾಲೆಹೊಸೂರ, ಹುಲ್ಲೂರು, ಬಟ್ಟೂರು, ಬಡ್ನಿ, ಯಳವತ್ತಿ, ಗೊಜನೂರು, ಮಂಜಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿಯೂ ಮೊಹರಂ ಆಚರಣೆ ವಿಜೃಂಭಣೆಯಿಂದ ನಡೆಯಿತು. ವಿಶೇಷವೆಂದರೆ ಮುಸ್ಲಿಂ ಕುಟುಂಬಗಳೇ ಇಲ್ಲದ ಅಡರಕಟ್ಟಿ ಹಾಗೂ ಒಡೆಯರ ಮಲ್ಲಾಪುರ ಗ್ರಾಮಗಳಲ್ಲಿಯೂ ಸಂಪ್ರದಾಯದಂತೆ ಮೊಹರಂ ಆಚರಿಸಿ ಧಾರ್ಮಿಕ ಸೌಹಾರ್ದಕ್ಕೆ ಮತ್ತೊಮ್ಮೆ ಸಾಕ್ಷಿಯಾದವು.

ಹುಲಿವೇಷ, ಫಕೀರರ ವೇಷ, ಅಳ್ಳೊಳ್ಳಿ ಬಾವಾಗಳ ವೇಷಧಾರಿಗಳು, ಅಲಾಯಿ ಕುಣಿತ, ಹೆಜ್ಜೆ ಮೇಳ, ಶಸ್ತ್ರಸೇವೆ, ಬಾರಕೋಲು ಸೇವೆ, ಕೆಂಡ ಹಾಯುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಮೆರುಗನ್ನು ಹೆಚ್ಚಿಸಿದವು. ಹರಕೆ ಹೊತ್ತಿದ್ದ ಹಿಂದೂ ಹಾಗೂ ಮುಸ್ಲಿಂ ಭಕ್ತರು ಪಾಂಜಾ ದೇವರಿಗೆ ಸಕ್ಕರೆ ಓದು ಹಾಕಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಕಳೆದ ಐದು ದಿನಗಳಿಂದ ಹಜರತ್ ಹಸನ್–ಹುಸೈನ್ ಅವರ ತ್ಯಾಗವನ್ನು ಸ್ಮರಿಸಿ ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ ಹಾಗೂ ಶೋಕಾಚರಣೆಗಳು ನಡೆದವು. ಗದಗದ ಇರಾನಿ ಕಾಲೋನಿಯ ಶಿಯಾ ಮುಸ್ಲಿಂ ಸಮುದಾಯದವರು ಕರ್ಬಲಾ ಘಟನೆಯನ್ನು ಸ್ಮರಿಸಿ ಸಂಪ್ರದಾಯದಂತೆ ಮಾತಂ (ಎದೆ ಬಡಿದುಕೊಂಡು ಶೋಕ ವ್ಯಕ್ತಪಡಿಸುವುದು) ಆಚರಿಸಿ ಶೋಕ ಮೆರವಣಿಗೆ ನಡೆಸಿದರು. ಶೋಕಗೀತೆಗಳ ನಡುವೆ ಕಣ್ಣೀರು ಸುರಿಸುತ್ತ ಭಕ್ತರು ತ್ಯಾಗದ ಸಂದೇಶವನ್ನು ಸ್ಮರಿಸಿದರು.

ಬರಗಾಲದ ನಡುವೆ ಮಂಕಾದ ಸಂಭ್ರಮ

ಈ ಬಾರಿ ಬರಗಾಲ ಹಾಗೂ ಕೃಷಿ ಸಂಕಷ್ಟದ ಪರಿಣಾಮ ಮೊಹರಂ ಹಬ್ಬದ ಸಂಭ್ರಮದ ಮೇಲೂ ಕಂಡುಬಂದಿತು. ಹಿಂದಿನ ವರ್ಷಗಳಂತೆ ರಾತ್ರಿಯಿಡೀ ಹೆಜ್ಜೆ ಮೇಳ, ಹಾಡು, ನೃತ್ಯ ಹಾಗೂ ಜನಸಾಗರ ಕಾಣಿಸದಿದ್ದರೂ, “ಸಂಪ್ರದಾಯ ಬಿಡಬಾರದು” ಎಂಬ ಭಾವನೆಯೊಂದಿಗೆ ಭಕ್ತರು ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಕೃಷಿಯನ್ನೇ ಜೀವನವಾಗಿಸಿಕೊಂಡಿರುವ ಅನೇಕ ಕುಟುಂಬಗಳಲ್ಲಿ ಸಂಕಷ್ಟದ ಛಾಯೆ ಕಂಡರೂ, ಭಕ್ತಿ ಮತ್ತು ಭಾವೈಕ್ಯ ಮಾತ್ರ ಮಂಕಾಗಲಿಲ್ಲ.

ತ್ಯಾಗದ ಸಂಕೇತ ಮೊಹರಂ

ಮೊಹರಂ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅನ್ಯಾಯದ ವಿರುದ್ಧದ ಹೋರಾಟ, ಸತ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಜರತ್ ಹಸನ್ ಮತ್ತು ಹಜರತ್ ಹುಸೈನ್ ಅವರ ಆದರ್ಶವನ್ನು ನೆನಪಿಸುವ ಪವಿತ್ರ ಹಬ್ಬವಾಗಿದೆ. ಈ ಹಬ್ಬವು ವರ್ಷದಿಂದ ವರ್ಷಕ್ಕೆ ಗದಗ ಜಿಲ್ಲೆಯಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದದ ಜೀವಂತ ಸಂಕೇತವಾಗಿ ಆಚರಿಸಲ್ಪಡುತ್ತಿದ್ದು, ಧರ್ಮಕ್ಕಿಂತ ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದೆ.


Spread the love

LEAVE A REPLY

Please enter your comment!
Please enter your name here