ಗದಗ: ದೇವಸ್ಥಾನದ ರಥಕ್ಕೆ ಮುಸ್ಲಿಂ ಮುಖಂಡರು ದೇಣಿಗೆಯಾಗಿ ನೀಡಿದ್ದ ಚಕ್ರದ ವಿವಾದ ಇದೀಗ ಕ್ರಿಮಿನಲ್ ಪ್ರಕರಣದ ಹಂತ ತಲುಪಿದೆ. ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಿ, ಎರಡು ಸಮುದಾಯಗಳ ನಡುವೆ ದ್ವೇಷ ಹಾಗೂ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶ ಹೊಂದಿದ್ದವು ಎಂಬ ಆರೋಪದಡಿ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ರಾಜು ಖಾನಪ್ಪನವರ, ಮಹೇಶ್ ರೋಖಡೆ, ಶಿವಕುಮಾರ ಮಿಟ್ಟಿಮಠ, ಶಿವಯೋಗಿ ಹಿರೇಮಠ, ಬಿ.ಕೆ. ಕಾಳೆ, ಶಂಕರ ಕಾರದಕಟ್ಟಿ, ವೆಂಕಟೇಶ ದೊಡ್ಡಮನಿ, ಈರಪ್ಪ ಹೆಬಸೂರ, ವಿಶಾಲ್ ಗೋಕಾವಿ, ಆನಂದ ಹರಿಕೇರಿ, ಸತೀಶ ಕುಂಬಾರ ಹಾಗೂ ಸಂಜು ಚಟ್ಟಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196(1), 196(2), 197(1), 299, 300 ಹಾಗೂ 353(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂನ್ 22ರಂದು ಗದಗ-ಮುಳಗುಂದ ರಸ್ತೆಯ ಹುಡ್ಕೋ ಕಾಲೋನಿಯ ಬಳಿ ಇರುವ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳು ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಮುಸ್ಲಿಂ ಮುಖಂಡ ಫೀರಸಾಬ್ ಕೌತಾಳ ಅವರು ಶ್ರೀ ವೀರೇಶ್ವರ ಪುಣ್ಯಾಶ್ರಮದ ರಥಕ್ಕೆ ಚಕ್ರವನ್ನು ದೇಣಿಗೆಯಾಗಿ ನೀಡಿರುವುದು, ಅದರ ಮೇಲೆ ತಮ್ಮ ಪತ್ನಿಯ ಹೆಸರನ್ನು ಬರೆಯಿಸಿರುವುದು ಹಾಗೂ ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ನೂತನ ರಥಕ್ಕೂ ದೇಣಿಗೆ ನೀಡಿರುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ರಥದ ಮೇಲೆ ಮುಸ್ಲಿಂ ಮಹಿಳೆಯ ಹೆಸರನ್ನು ಬರೆಯುವುದು ಅಕ್ಷಮ್ಯ ಅಪರಾಧ ಎಂದು ಹೇಳುವ ಮೂಲಕ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ, ವೈಮನಸ್ಸು ಮತ್ತು ಉದ್ವಿಗ್ನತೆ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಈ ಹೇಳಿಕೆಗಳ ವಿಡಿಯೊಗಳನ್ನು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಮಠ ಹಾಗೂ ದೇವಸ್ಥಾನಗಳ ಕುರಿತು ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಹರಿಬಿಟ್ಟಿದ್ದಾರೆ. ಈ ಕೃತ್ಯದಿಂದ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಣಗಿನಹಾಳ ಗ್ರಾಮದ ರೈತ ಕಳಕಪ್ಪ ಬಸಪ್ಪ ನೀರಲಗಿ ಅವರು ನೀಡಿದ ದೂರಿನ ಮೇರೆಗೆ ಗದಗ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



