ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 20-25 ದಿನಗಳಿಂದ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಗ್ರಾಮದೇವತೆಗೆ 108 ಕುಂಭಗಳಿಂದ ಜಲಾಭಿಷೇಕ ನೆರವೇರಿಸಿ ಉತ್ತಮ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ ಹುಣ್ಣಿಮೆ ಅಂಗವಾಗಿ ಮುಂಜಾನೆಯಿಂದಲೇ ಶ್ರೀ ರೇಣುಕಾ ಮಂದಿರದಿಂದ ನೂರಾರು ಮಹಿಳೆಯರು ಪೂರ್ಣಕುಂಭಗಳನ್ನು ಹೊತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಗ್ರಾಮದೇವಿ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ದೇವಿಯ ಉತ್ಸವ ಮೂರ್ತಿಗೆ 108 ಕುಂಭಗಳ ಜಲಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಯಿತು. ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವೂ ನಡೆಯಿತು.
ಜಾಗೃತ ದೇವತೆಯಾದ ಗ್ರಾಮದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವರುಣ ದೇವನ ಕೃಪೆಗೆ ಪ್ರಾರ್ಥಿಸಿದರು.
ಬಳಿಕ ಗ್ರಾಮದ ಭಜನಾ ತಂಡಗಳು ದೇವಸ್ಥಾನದ ಆವರಣದಲ್ಲಿ ಸಂಜೆಯವರೆಗೂ ದೇವಿಯ ಸ್ತುತಿಗೀತೆಗಳನ್ನು ಹಾಡಿ ಭಜನೆ ಸಲ್ಲಿಸಿದವು. ಮಧ್ಯೆ ತುಂತುರು ಮಳೆ ಸುರಿದರೂ ಭಜನೆ ನಿರಂತರವಾಗಿ ಮುಂದುವರಿಯಿತು.
ಗ್ರಾಮದ ಮುಖಂಡರು ಹಾಗೂ ಹಿರಿಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಉತ್ತಮ ಮಳೆಯಾಗಿ ನಾಡು ಹಸನಾಗಲಿ, ರೈತರ ಬದುಕು ಸಮೃದ್ಧಿಯಾಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು.



