ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ಅವರನ್ನು ಮೂರು ವರ್ಷಗಳ ಅವಧಿಯವರೆಗೆ ರಾಜ್ಯ ಸರ್ಕಾರ ನೇಮಕ ಮಾಡಿ ಮಂಗಳವಾರ ಆದೇಶಿಸಿದೆ. ಇದು ಬಿಜೆಪಿಯ ಮುಖಂಡರ, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದಲ್ಲಿ ಇದುವರೆಗೂ ಯಾರೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಮುಖಂಡ ಸಿದ್ದು ಪಲ್ಲೇದ ಅವರು ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದರು. ಆದರೆ, ಸರ್ಕಾರ ಹಾಗೂ ಪಕ್ಷ ಈ ಹಿಂದೆ ಬ್ರಾಹ್ಮಣ ಕೋಟಾದಲ್ಲಿ ಕೃಷ್ಣ ಹೊಂಬಾಳೆಯವರು ಅಧ್ಯಕ್ಷರಾಗಿದ್ದರೂ, ಬ್ರಾಹ್ಮಣ ಸಮುದಾಯದ ಶ್ರೀಪತಿ ಉಡುಪಿಯವರೆಗೆ ಮತ್ತೆ ಮಣೆ ಹಾಕಿದೆ.
ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶ್ರೀಪತಿ ಉಡುಪಿ ಅವರು ಪ್ರಾಧಿಕಾರದ ಅಧ್ಯಕ್ಷರಾಗಿರುವುದಕ್ಕೆ ಪಕ್ಷದಲ್ಲಿ ಕೆಲವರಿಗೆ ಅಸಮಾಧಾನವನ್ನುಂಟು ಮಾಡಿದೆ. ಏಕೆಂದರೆ, ಕಳೆದ ಬಾರಿ ಬಣಜಿಗ ಸಮುದಾಯ ಸಂಗಮೇಶ ದುಂದೂರ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಹೀಗೆ ಬಹುತೇಕ ಎಲ್ಲ ಸಮುದಾಯವರಿಗೂ ಅಧ್ಯಕ್ಷ ಪಟ್ಟ ಸಿಕ್ಕಿತ್ತು. ಆದರೆ, ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯದ ಬಹುತೇಕ ಜನ ಸಿದ್ದು ಪಲ್ಲೇದ ಅವರ ನೇಮಕ ಮಾಡಲು ಸಂಪೂರ್ಣ ಬೆಂಬಲ ನೀಡಿದ್ದರು. ಇದೀಗ ಶ್ರೀಪತಿ ಉಡುಪಿ ಅವರ ನೇಮಕ ಸಮುದಾಯದ ಬಹುತೇಕ ಜನರಲ್ಲಿ ಅಸಮಾಧಾನ ಉಂಟು ಮಾಡಿದೆ.
ಅದರಂತೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟಕ್ಕೆ ಪ್ರಬಲ ಲಿಂಗಾಯತ ಸಮುದಾಯದವರಿಗೆ ಅವಕಾಶ ಕೊಟ್ಟಿದ್ದರೆ ಮುಂಬರುವ ವಿಧಾನಸಭೆ, ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಆದರೆ, ಸರ್ಕಾರ ಶ್ರೀಪತಿ ಉಡುಪಿ ಅವರನ್ನು ನೇಮಕ ಮಾಡಿದ್ದು, ಮುಂದಿನ ಚುನಾವಣೆಗಳಲ್ಲಿ ಕಮಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ಡಿಸೆಂಬರ್ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಸಿದ್ದು ಪಲ್ಲೇದ ಅವರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್ನವರು ಕಸರತ್ತು ನಡೆಸಿದ್ದರೂ ಸಿದ್ದು ಪಲ್ಲೇದ ಅವರು ಪಕ್ಷ ನಿಷ್ಠೆ ತೋರಿದ್ದರು. ಆದರೆ, ಇದೀಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನೇಮಕ ವೇಳೆ ಹೆಸರು ಕೈಬಿಟ್ಟಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.