ಶ್ರೀನಗರ: ಅಯೋಧ್ಯೆ ರಾಮಮಂದಿರ ಹಾಗೂ ಬದರಿನಾಥ ದೇಗುಲದ ದೇಣಿಗೆ ಅಕ್ರಮದ ಚರ್ಚೆಗಳ ಬೆನ್ನಲ್ಲೇ ಇದೀಗ ಜಮ್ಮುವಿನ ಕಟ್ರಾದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ದೇಗುಲದ ಬೆಳ್ಳಿ ಕಾಣಿಕೆ ವಿಚಾರದಲ್ಲಿ ಅಕ್ರಮದ ಆರೋಪ ಕೇಳಿಬಂದಿದೆ.
ಭಕ್ತರು ದೇಗುಲಕ್ಕೆ ಅರ್ಪಿಸಿದ ಸುಮಾರು 530 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ದೇಗುಲ ಮಂಡಳಿ ಪರೀಕ್ಷೆಗಾಗಿ ಸರ್ಕಾರಿ ಟಂಕಸಾಲೆಗೆ ಕಳುಹಿಸಿದ್ದ 20 ಟನ್ ಬೆಳ್ಳಿಯ ಪೈಕಿ ಬಹುತೇಕ ಪ್ರಮಾಣ ನಕಲಿ ಲೋಹ ಮಿಶ್ರಿತವಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪರೀಕ್ಷೆಗೆ ಒಳಪಡಿಸಿದ ಬೆಳ್ಳಿಯಲ್ಲಿ ಶೇ.95ರಷ್ಟು ನಕಲಿ ಲೋಹದ ಮಿಶ್ರಣ ಕಂಡುಬಂದಿದ್ದು, ಕೇವಲ ಶೇ.5 ರಿಂದ 6ರಷ್ಟು ಮಾತ್ರ ಶುದ್ಧ ಬೆಳ್ಳಿ ಇತ್ತು ಎಂದು ತಿಳಿದುಬಂದಿದೆ.
ಇದಲ್ಲದೆ ಬೆಳ್ಳಿಯಲ್ಲಿ ಕ್ಯಾಡ್ಮಿಯಂ, ಕಬ್ಬಿಣ ಸೇರಿದಂತೆ ಇತರ ಲೋಹಗಳ ಮಿಶ್ರಣ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಪ್ರಕರಣದ ತನಿಖೆಯಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಜಮ್ಮು ನ್ಯಾಯಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಕರಣದಲ್ಲಿ ಭಕ್ತರು ಅರ್ಪಿಸಿದ ಬೆಳ್ಳಿಯೇ ನಕಲಿಯಾಗಿತ್ತೇ ಅಥವಾ ದೇಗುಲ ಟ್ರಸ್ಟ್ನಲ್ಲಿಯೇ ಯಾವುದೇ ಅಕ್ರಮ ನಡೆದಿದೆಯೇ ಎಂಬುದು ಈಗ ತನಿಖೆಯ ಪ್ರಮುಖ ಅಂಶವಾಗಿದೆ.
ವೈಷ್ಣೋದೇವಿ ದೇಗುಲ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡಿ ಕಾಣಿಕೆ ಸಲ್ಲಿಸುತ್ತಾರೆ. ಇಂತಹ ದೇಗುಲದಲ್ಲಿ ಕಾಣಿಕೆ ರೂಪದಲ್ಲಿ ಬಂದ ಬೆಳ್ಳಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿರುವುದು ಚರ್ಚೆಗೆ ಕಾರಣವಾಗಿದೆ.
ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಸಂಪೂರ್ಣ ಸತ್ಯ ತನಿಖೆಯ ಬಳಿಕವೇ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



