ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ “ಶ್ರೀ ಗುರು ಪೂರ್ಣಿಮೋತ್ಸವ–2026” ಅಂಗವಾಗಿ ಜುಲೈ 19ರಿಂದ 29ರವರೆಗೆ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಭಕ್ತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಉತ್ಸವದ ಅಂಗವಾಗಿ ಜುಲೈ 19ರಿಂದ 28ರವರೆಗೆ ಪ್ರತಿದಿನ ಸಂಜೆ 7ರಿಂದ 8 ಗಂಟೆಯವರೆಗೆ ಹಿರಿಯ ಆಧ್ಯಾತ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಅವರಿಂದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ ನಡೆಯಲಿದೆ. ಸಾಯಿಬಾಬರ ಜೀವನ ಸಂದೇಶ, ಗುರುಭಕ್ತಿ, ಸೇವೆ, ಸತ್ಯ, ಸದಾಚಾರ ಹಾಗೂ ಮಾನವೀಯ ಮೌಲ್ಯಗಳ ಕುರಿತು ಭಕ್ತರಿಗೆ ಪ್ರವಚನ ನೀಡಲಾಗುವುದು.
ಜುಲೈ 22ರಿಂದ 28ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮೂಹಿಕ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
ಜುಲೈ 26ರಂದು ಬೆಳಿಗ್ಗೆ 9 ಗಂಟೆಯಿಂದ ಜೋಳಿಗೆ ಭಿಕ್ಷೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ರೀ ಸಾಯಿ ಮಂದಿರದಿಂದ ವಿವೇಕಾನಂದ ಬಡಾವಣೆ ಹಾಗೂ ಕರಿಯಮ್ಮಕಲ್ಲ ಬಡಾವಣೆ ಮಾರ್ಗವಾಗಿ ಶ್ರೀ ರಾಘವೇಂದ್ರಸ್ವಾಮಿ ಮಠದ ಮೂಲಕ ಮೆರವಣಿಗೆ ಮರಳಿ ಮಂದಿರಕ್ಕೆ ಆಗಮಿಸಲಿದೆ.
ಉತ್ಸವದ ಸಮಾರೋಪದ ಅಂಗವಾಗಿ ಜುಲೈ 29ರಂದು ಶ್ರೀ ಶಿರಡಿ ಸಾಯಿಬಾಬಾರ ಸಮಾಧಿ ಶತಾಬ್ದಿ ಸ್ಮರಣೋತ್ಸವ ಹಾಗೂ ಗುರು ಪೂರ್ಣಿಮೆ ವಿಶೇಷ ಆಚರಣೆ ನಡೆಯಲಿದ್ದು, ಕಾಕಡ ಆರತಿ, ಮಂಗಳಸ್ನಾನ, ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಮೂಹಿಕ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಧೂಪಾರತಿ ಹಾಗೂ ಶೇಜಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಭಕ್ತರು ಮಹಾಅನ್ನಸಂತರ್ಪಣೆಗಾಗಿ ದವಸ-ಧಾನ್ಯ ಅಥವಾ ನಗದು ರೂಪದಲ್ಲಿ ದೇಣಿಗೆ ನೀಡಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಯಿನಾಥರ ಕೃಪೆಗೆ ಪಾತ್ರರಾಗುವಂತೆ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.



