ವಿಜಯಸಾಕ್ಷಿ ಸುದ್ದಿ, ಗದಗ:
ಹೆಜ್ಜೇನು ಗೂಡಿಗೆ ಬೆಂಕಿಯ ಹೊಗೆ ತಾಕಿದ ಪರಿಣಾಮ ಶಾಲಾ ಮಕ್ಕಳನ್ನು ಅಟ್ಟಾಡಿಸಿಕೊಂಡು ಕಚ್ಚಿದ ಮನಕಲಕುವ ಘಟನೆ ಬೆಟಗೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಬೆಟಗೇರಿ ಲೊಯೊಲಾ ಸ್ಕೂಲ್ ನಲ್ಲಿ ಪರೀಕ್ಷೆ ಮುಗಿಸಿದ ನಂತರ ವಿದ್ಯಾರ್ಥಿಗಳು ಮನೆ ಕಡೆ ಹೊರಟಿದ್ದಾರೆ. ಆದರೆ ಕೆಲ ಮಕ್ಕಳು ಆಟೋ ಬರುವುದು ತಡವಾಗಿದ್ದರಿಂದ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಆಟ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪಾರ್ಕ್ ಬಳಿ ಇರುವ ಮನೆಯೊಂದರ ಮುಂದೆ ವೃದ್ಧರೊಬ್ಬರೊಬ್ಬರು ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಹೊಗೆ ಜೋರಾಗಿದೆ ಎನ್ನಲಾಗಿದೆ. ಇದರಿಂದಾಗಿ ವಾಟರ್ ಟ್ಯಾಂಕ್ ಮೇಲೆ ಇದ್ದ ಹೆಜ್ಜೇನು ಮಕ್ಕಳ ಮೇಲೆ ದಾಳಿ ನಡೆಸಿವೆ.
ಇದರಿಂದ ಭಯಭಿತಗೊಂಡ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಆದರೂ ಬಿಡದ ಜೇನುಹುಳಗಳು ಕಚ್ಚಿ ಗಾಯಗೊಳಿಸಿವೆ. ನೋವು, ಸಂಕಟ ತಾಳಲಾರದೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲ ಜನರ ಮೇಲೂ ಹೆಜ್ಜೇನು ದಾಳಿ ಮಾಡಿವೆ.
ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡ ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.