ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ರೈತರ ಬದುಕು ಸುಧಾರಿಸಲಿ ಹಾಗೂ ಉತ್ತಮ ಮಳೆಯಾಗಲಿ ಎಂಬ ಆಶಯದೊಂದಿಗೆ ಹಗರಿಬೊಮ್ಮನಹಳ್ಳಿ ಎಪಿಎಂಸಿ ಆವರಣದಲ್ಲಿ ಆಹಾರ ಧಾನ್ಯ ವರ್ತಕರ ಸಂಘದ ವತಿಯಿಂದ ಗುರುವಾರ ಪರ್ಜನ್ಯ ಹೋಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಅಂಬಾಡಿ ಮಹೇಶ್, “ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ರೈತರ ಬದುಕು ಚಿಂತಾಜನಕವಾಗಿದೆ. ಭಾರತವು ಸನಾತನ ಸಂಸ್ಕೃತಿಯ ದೇಶವಾಗಿದ್ದು, ಮಳೆ ಕೊರತೆಯಾದಾಗ ವರುಣ ದೇವನಿಗೆ ಪೂಜೆ-ಹೋಮಗಳನ್ನು ನಡೆಸುವ ಪರಂಪರೆ ಇದೆ. ಅದೇ ನಿಟ್ಟಿನಲ್ಲಿ ಜನಕಲ್ಯಾಣ ಹಾಗೂ ರೈತರ ಹಿತದೃಷ್ಟಿಯಿಂದ ಪರ್ಜನ್ಯ ಹೋಮ ಆಯೋಜಿಸಲಾಗಿದೆ,” ಎಂದು ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಪ್ರಕಾಶ್ ಗೌಡ ಮಾತನಾಡಿ, “ಈ ವೇಳೆಗೆ ಬೆಳೆಗಳು ಉತ್ತಮ ಹಂತದಲ್ಲಿರಬೇಕಾಗಿತ್ತು. ಆದರೆ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಎಪಿಎಂಸಿಗೆ ಆಹಾರ ಧಾನ್ಯಗಳ ಆಗಮನವೂ ಕುಂಠಿತವಾಗುವ ಆತಂಕ ಎದುರಾಗಿದೆ. ಈ ಪರಿಸ್ಥಿತಿ ಬದಲಾಗಲೆಂಬ ಆಶಯದಿಂದ ಪರ್ಜನ್ಯ ಹೋಮ ಕೈಗೊಳ್ಳಲಾಗಿದೆ,” ಎಂದರು.
ಬೆಳಿಗ್ಗೆ 7 ಗಂಟೆಗೆ ಆರಂಭವಾದ ಪರ್ಜನ್ಯ ಹೋಮ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಿತು. ಬ್ರಾಹ್ಮಣ ಪುರೋಹಿತ ವೆಂಕಟೇಶ್ ಹಾಗೂ ತಂಡ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ವರ್ತಕರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ರೈತರು, ಎಪಿಎಂಸಿ ಸಿಬ್ಬಂದಿ, ಹಮಾಲರು ಹಾಗೂ ವರ್ತಕರು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಧಾನ್ಯ ವರ್ತಕರ ಸಂಘದ ಉಪಾಧ್ಯಕ್ಷ ಒಂಟಿಗೋಡಿ ಚನ್ನಬಸಪ್ಪ, ಬಂಡಿಹಳ್ಳಿ ಉಪ್ಪಾರ ರಾಮಪ್ಪ, ಅರಳಿಹಳ್ಳಿ ಪೋತಗುಳ್ಳಿ ನಾಗರಾಜ, ದೇವರೆಡ್ಡಿ, ಶಿವಣ್ಣ, ಚಿಂತ್ರಪಳ್ಳಿ ಪ್ರಕಾಶ್, ಖಜಾಂಚಿ ಹನುಮರೆಡ್ಡಿ, ಕಾರ್ಯದರ್ಶಿ ವೆಂಕಟೇಶ್, ಪರಶುರಾಮ್, ಸತೀಶ್, ಪ್ರಸನ್ನ, ಟಿ. ಬಸವರಾಜ್, ಮಾರುತಿ ಶೆಟ್ರು, ಮಲ್ಲಣ್ಣ, ರಾಕೇಶ್ ಮನೋಹರ, ರಾಜಶೇಖರ್, ಶಿವು, ಕಂಠಿ ಶಿವು, ಎಂ.ಸಿ. ನಾಗರಾಜ್, ಎಲ್.ಟಿ.ಪಿ. ಬಸವರಾಜ್, ರಾಘವೇಂದ್ರ ಸೇರಿದಂತೆ ವರ್ತಕರು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು.
“ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರ ಬದುಕು ಚಿಂತಾಜನಕವಾಗಿದೆ. ಉತ್ತಮ ಮಳೆಯಾಗಿ ರೈತರ ಸಂಕಷ್ಟ ದೂರವಾಗಲೆಂಬ ಉದ್ದೇಶದಿಂದ ಪರ್ಜನ್ಯ ಹೋಮ ನಡೆಸಿದ್ದೇವೆ.”
– ಅಂಬಾಡಿ ಮಹೇಶ್, ಅಧ್ಯಕ್ಷರು, ತಾಲೂಕು ಆಹಾರ ಧಾನ್ಯ ವರ್ತಕರ ಸಂಘ, ಹಗರಿಬೊಮ್ಮನಹಳ್ಳಿ



