ವಿಜಯಸಾಕ್ಷಿ ಸುದ್ದಿ, ಗದಗ:
ಗದಗನ ಹೃದಯ ಭಾಗದಲ್ಲಿರುವ ಜವಳಗಲ್ಲಿಯ ರಾಜ ಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿರುವ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಬೆಟಗೇರಿಯಲ್ಲಿ ನಗರಸಭೆ ಮೀಸಲಿಟ್ಟಿರುವ ಒಂದು ಎಕರೆ ಜಾಗಕ್ಕೆ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಒತ್ತಾಯಿಸಿದರು.
ಶನಿವಾರ ನಗರದ ರಾಯಲ್ ವಿಲ್ಲಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಂಸ ಕತ್ತರಿಸುವುದರಿಂದ ರಕ್ತ, ರಾಜ ಕಾಲುವೆ ಸೇರುತ್ತದೆ. ಇದರಿಂದ ದುರ್ವಾಸನೆ ಬೀರುತ್ತದೆ. ಸಮೀಪದಲ್ಲಿ ಜೈನ ಮಂದಿರವಿದ್ದು, ಮಂದಿರಕ್ಕೆ ಬರುವ ಭಕ್ತರಿಗೆ ಇದರಿಂದ ತೊಂದರೆಯಾಗಲಿದೆ. ಅವರ ಭಾವನೆಗಳಿಗೆ ಧಕ್ಕೆಯಾಗಲಿದೆ. ಇನ್ನು ರಾಜಕಾಲುವೆ ಮೇಲೆ ಅನಧಿಕೃತ ಕಟ್ಟಡ ಕಟ್ಟಲು, ಮಾಂಸದ ಅಂಗಡಿ ನಿರ್ಮಿಸಲು ಬರುವುದಿಲ್ಲ. ಅಲ್ಲದೆ, ರಾಜಕಾಲುವೆ ಬಫರ್ ಜೋನ್ ನಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ. ಹೀಗಾಗಿ ಬೆಟಗೇರಿ ಭಾಗದಲ್ಲಿ ಮೀಸಲಿರಿಸಿರುವ ಜಾಗಕ್ಕೆ ಸ್ಥಳಾಂತರಿಸಬೇಕು.
ಜವಳಗಲ್ಲಿ ಸುಮಾರು ಹದಿನಾರು ಎಕರೆ ವಿಸ್ತೀರ್ಣದಲ್ಲಿದ್ದು, ಆ ಜಾಗ ವೀರನಾರಾಯಣ ದೇವಸ್ಥಾನಕ್ಕೆ ಸೇರಿದೆ. ಈವೆರಲ್ಲ ಅನಧಿಕೃತವಾಗಿ ವಾಸವಾಗಿದ್ದು, ಇಲ್ಲಿ ಮುಸ್ಲಿಂ ಪುಡಾರಿಗಳ ದಬ್ಬಾಳಿಕೆ ಹಾಗೂ ಅವರ ಬೆಂಬಲವಿದೆ. ಜವಳಗಲ್ಲಿಯಲ್ಲಿ ಇರುವ ಜನರಿಗೆ ರೆಹಮತ್ ನಗರದಲ್ಲಿ ಮನೆ ಮಂಜೂರು ಆಗಿದ್ದರೂ ಅಲ್ಲಿರುವ ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿ ಜವಳಗಲ್ಲಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ವಾಸವಾಗಿರುವವರನ್ನು ಖಾಲಿ ಮಾಡಿಸಬೇಕು. ಅಲ್ಲದೆ, ದೇವಸ್ಥಾನದ ಒಂದಿಂಚು ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂದರು.
ರಾಜ್ಯದಲ್ಲಿ ಹಿಜಾಬ್ ಹಾಗೂ ಹಲಾಲ್ ವಿಚಾರ ಭಾರೀ ಚರ್ಚೆಯಲ್ಲಿದ್ದು, ಮುಸ್ಲಿಂರು ಅಲ್ಲಾನನ್ನು ನಂಬಬೇಕೇ ಹೊರತು ಮುಲ್ಲಾನನ್ನು ಅಲ್ಲ. ಏಕೆಂದರೆ, ಮುಲ್ಲಾಗಳು ಕಾಂಗ್ರೆಸ್ ಚೇಲಾಗಳಂತೆ, ಏಜೆಂಟರ್ ಅಂತೆ ವರ್ತಿಸುತ್ತಿದ್ದಾರೆ. ಹಿಜಾಬ್, ಬುರ್ಕಾ ಧರಿಸುವುದಕ್ಕಿಂತ ಮುನ್ನ ವೈಜ್ಞಾನಿಕ ಕಾರಣ ತಿಳಿದುಕೊಳ್ಳಬೇಕು. ಅರಬ್ ರಾಷ್ಟ್ರಗಳಲ್ಲಿ ಬುರ್ಕಾ, ಹಿಜಾಬ್ ಧರಿಸಿದರೂ ಕಪ್ಪು ಬಣ್ಣದ್ದು ಬಳಸುವುದಿಲ್ಲ. ಬದಲಾಗಿ ಗ್ರೇ, ಗ್ರಿನ್ ಇನ್ನಿತರ ಬಣ್ಣಗಳದ್ದು ಧರಿಸುತ್ತಾರೆ. ಅರಬ್ ದೇಶಗಳಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಬಿಸಿಲು ಕಾಯ್ದರೆ ಬೋನ್ ಕ್ಯಾನ್ಸರ್ ಹಾಗೂ ಚರ್ಮ ರೊಗ ಬರುತ್ತದೆ ಎಂಬ ಕಾರಣಕ್ಕೆ ಧರಿಸುತ್ತಾರೆ. ಹೀಗಾಗಿ ನಮ್ಮಲ್ಲಿ ಬುರ್ಕಾ ಹಾಕುವ ಅವಶ್ಯಕತೆ ಇಲ್ಲ. ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕು, ಹೈಕೋರ್ಟ್ ಆದೇಶ ಧಿಕ್ಕರಿಸಿ ನಡೆಯುತ್ತಿರುವುದು ಸರಿಯಲ್ಲ ಎಂದು ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರ, ಉಷಾ ದಾಸರ, ಸುನಂದಾ ಬಾಕಳೆ, ರಾಘವೇಂದ್ರ ಯಳವತ್ತಿ, ವಿಜಯಲಕ್ಷ್ಮಿ ಮಾನ್ವಿ, ವಿನಾಯಕ ಮಾನ್ವಿ, ಅನಿಲ್ ಅಬ್ಬಿಗೇರಿ, ಸಿದ್ದು ಪಲ್ಲೇದ ಸೇರಿದಂತೆ ಹಲವರಿದ್ದರು.