HomeGadag News100 ದಿನಗಳಲ್ಲಿ ಗದಗನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿಸೋಣ: ಎಚ್.ಕೆ. ಪಾಟೀಲ

100 ದಿನಗಳಲ್ಲಿ ಗದಗನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿಸೋಣ: ಎಚ್.ಕೆ. ಪಾಟೀಲ

ಗದಗ: “ರಾಜಕೀಯ ಎಂದರೆ ಕೇವಲ ಅಧಿಕಾರವಲ್ಲ, ಜನಸೇವೆಯೇ ನಮ್ಮ ಮೊದಲ ಆದ್ಯತೆ. ಗದಗವನ್ನು ಸೇವಾ ಕಾರ್ಯಗಳ ಮೂಲಕ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿಸುವ ಸಂಕಲ್ಪದೊಂದಿಗೆ ಮುಂದಿನ 100 ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರೋಣ” ಎಂದು ಶಾಸಕ ಎಚ್.ಕೆ. ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.

ಸಂಪುಟ ವಿಸ್ತರಣೆಯ ಬಳಿಕ ಮೊದಲ ಬಾರಿಗೆ ಗದಗಕ್ಕೆ ಆಗಮಿಸಿದ ಎಚ್.ಕೆ. ಪಾಟೀಲ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಭಾವನಾತ್ಮಕ ಹಾಗೂ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರ ಪ್ರೀತಿ, ಅಭಿಮಾನ ಮತ್ತು ಬೆಂಬಲವೇ ನನಗೆ ನೈತಿಕ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬಿದೆ ಎಂದು ಹೇಳಿದರು.

ಸಚಿವ ಸ್ಥಾನ ಸಿಗದಿರುವುದರಿಂದ ತಮ್ಮನ್ನು ಪ್ರೀತಿಸುವ ಕಾರ್ಯಕರ್ತರಿಗೆ ನೋವಾಗಿದೆ ಎಂಬುದು ನನಗೆ ಗೊತ್ತಿದೆ. ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆ ಮತ್ತು ಪಾರದರ್ಶಕತೆಯನ್ನು ಬಯಸುವ ಎಲ್ಲರ ಭಾವನೆಗೆ ತಲೆಬಾಗುತ್ತೇನೆ. ಕಾಂಗ್ರೆಸ್ ಪಕ್ಷ ನನ್ನ ಸಾರ್ವಜನಿಕ ಬದುಕನ್ನು ರೂಪಿಸಿದ್ದು, ಪಕ್ಷದ ವರಿಷ್ಠರು ಹಾಗೂ ಸೋನಿಯಾ ಗಾಂಧಿ ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.

ಸೇವಾ ಕ್ಷೇತ್ರಕ್ಕೆ ಮಿತಿಯಿಲ್ಲ. ಜನಸೇವೆ ಮಾಡಲು ಸಚಿವ ಸ್ಥಾನವೇ ಬೇಕೆಂದಿಲ್ಲ. ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ. ಪಕ್ಷದ ತತ್ವ-ಸಿದ್ಧಾಂತಗಳ ಅನುಷ್ಠಾನದ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆಯ ಕಾಂಗ್ರೆಸ್ ಸದಸ್ಯರು ತಮ್ಮ ಬೆಂಬಲ ಸೂಚಕವಾಗಿ ನೀಡಿರುವ ರಾಜೀನಾಮೆಗಳನ್ನು ಹಿಂಪಡೆಯುವಂತೆ ಅವರು ಮನವಿ ಮಾಡಿದರು.

ರೋಣ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಪಕ್ಷ ವಿಧಾನಸಭೆ ಸಭಾನಾಯಕರಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಎಚ್.ಕೆ. ಪಾಟೀಲ, ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಸದೃಢವಾಗಲಿ ಎಂದು ಹಾರೈಸಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳದೆ ಕಾಂಗ್ರೆಸ್ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ವಾಸಣ್ಣ ಕುರಡಗಿ, ಸುರಪುರ, ಚನ್ನವೀರಪ್ಪ ಮಳಗಿ, ಸುಜಾತಾ ದೊಡ್ಡಮನಿ, ಬಸವರಾಜ ಕಡೇಮನಿ, ನೀಲಮ್ಮ ಬೋಳನವರ, ಸೈಯದ್ ಖಾಲಿದ್ ಕೊಪ್ಪಳ, ಬರಕತ್ ಅಲಿ ಮುಲ್ಲಾ, ಕೃಷ್ಣಾ ಪರಾಪೂರ, ಶ್ರೀನಿವಾಸ ಹುಯಿಲಗೋಳ ಸೇರಿದಂತೆ ಹಲವರು ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಎನ್. ಬಳ್ಳಾರಿ ವಂದಿಸಿದರು.

ಇನ್ನೂ ಈ ವೇಳೆ “ಸೇವಾ ಕ್ಷೇತ್ರಕ್ಕೆ ಮಿತಿಯಿಲ್ಲ. ಸಚಿವ ಸ್ಥಾನವಿಲ್ಲದಿದ್ದರೂ ಜನಸೇವೆಗೆ ಅವಕಾಶಗಳಿವೆ. ಮುಂದಿನ 100 ದಿನಗಳಲ್ಲಿ ಗದಗವನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿಸೋಣ.” ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img