ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಾನವನಿಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬುದ್ಧಿವಂತಿಕೆಯ ಜತೆಗೆ ಹೃದಯವಂತಿಕೆ, ವಿನಯ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಹುದ್ದೆ ಮತ್ತು ಅಧಿಕಾರಕ್ಕಿಂತ ವ್ಯಕ್ತಿಯ ಪ್ರಾಮಾಣಿಕತೆ, ನಿಷ್ಠೆ ಹಾಗೂ ನಡೆ-ನುಡಿಯೇ ಆತನ ಗೌರವವನ್ನು ನಿರ್ಧರಿಸುತ್ತದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಅನ್ನದಾನೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಡಿಟೋರಿಯಂ ಹಾಲ್ನಲ್ಲಿ ಶನಿವಾರ ನಡೆದ ನಿವೃತ್ತ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಅವರ ಅಭಿನಂದನಾ ಹಾಗೂ ನಿವೃತ್ತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಾನವನ ಜೀವನವೇ ಒಂದು ದೊಡ್ಡ ಅವಕಾಶ. ದೊರೆತ ಅವಕಾಶವನ್ನು ಸಮಾಜ, ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಒಳಿತಿಗಾಗಿ ಬಳಸಿಕೊಳ್ಳಬೇಕು. ಬುದ್ಧಿವಂತಿಕೆ ಎಷ್ಟು ಮುಖ್ಯವೋ, ಹೃದಯ ಶ್ರೀಮಂತಿಕೆಯೂ ಅಷ್ಟೇ ಮುಖ್ಯ. ಬುದ್ಧಿಯೊಂದಿಗೆ ಹೃದಯವಂತಿಕೆಯನ್ನೂ ಬೆಳೆಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಇಂಗ್ಲಿಷ್ ಪ್ರಾಧ್ಯಾಪಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ ಪ್ರಾಚಾರ್ಯರಾಗಿ ಸಂಸ್ಥೆಯನ್ನು ಮುನ್ನಡೆಸಿದ ಕೇಶಣ್ಣವರ ಅವರು ವಹಿಸಿಕೊಂಡ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ. ಸಂಸ್ಥೆಯ ಹಿತಕ್ಕಾಗಿ ತಮ್ಮ ಶಕ್ತಿಮೀರಿ ಸೇವೆ ಸಲ್ಲಿಸಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತಿಯಿಂದ ಕೇವಲ ಹುದ್ದೆಯ ಜವಾಬ್ದಾರಿ ಮುಗಿಯುತ್ತದೆ. ಆದರೆ ಸಂಸ್ಥೆ, ಗುರು-ಶಿಷ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ನಿರ್ಮಾಣವಾದ ಆತ್ಮೀಯ ಸಂಬಂಧಗಳು ಎಂದಿಗೂ ಮುಗಿಯುವುದಿಲ್ಲ. ಕೇಶಣ್ಣವರ ಅವರು ನಿವೃತ್ತಿಯ ನಂತರವೂ ತಮ್ಮ ಅನುಭವವನ್ನು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬಳಸಿಕೊಂಡು ಸೇವೆ ಮುಂದುವರಿಸಬೇಕು ಎಂದು ಸ್ವಾಮೀಜಿ ಆಶಿಸಿದರು.
ಗ್ರಾಮೀಣ ಭಾಗದ ಮಕ್ಕಳು ತಮ್ಮ ಊರಿನಲ್ಲಿಯೇ ಶಿಕ್ಷಣ ಪಡೆಯಬೇಕು ಎಂಬ ಹಿರಿಯರ ದೂರದೃಷ್ಟಿ ಹಾಗೂ ತ್ಯಾಗದ ಫಲವಾಗಿ ಸಂಸ್ಥೆ ಬೆಳೆದಿದೆ. ಸಂಸ್ಥೆಯ ನಿರ್ಮಾಣದ ಹಿಂದೆ ಇರುವ ಹಿರಿಯರ ಪರಿಶ್ರಮವನ್ನು ಇಂದಿನ ಪೀಳಿಗೆ ಮರೆಯಬಾರದು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ನಿಷ್ಠೆ, ವಿನಯ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಮಕ್ಕಳ ಶಿಕ್ಷಣದಲ್ಲಿ ಕೇವಲ ಅಂಕ ಗಳಿಕೆಗೆ ಒತ್ತು ನೀಡದೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಣವು ವಿದ್ಯಾರ್ಥಿಗಳನ್ನು ಜ್ಞಾನಿಗಳನ್ನಾಗಿ ಮಾಡುವ ಜತೆಗೆ ಉತ್ತಮ ಮನುಷ್ಯರನ್ನಾಗಿ ರೂಪಿಸಬೇಕು. ಹಿಂದಿನ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅದರ ಪ್ರಗತಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಚೇರ್ಮನ್ ಡಾ. ಎಸ್.ಎ. ಪಾಟೀಲ ಮಾತನಾಡಿದರು. ಎಸ್.ಎ.ವಿ.ವಿ.ಪಿ ಸಮಿತಿಯ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಡಾ. ಜಿ.ಕೆ. ಕಾಳೆ, ಬಿ.ಎಫ್. ಚೇಗರಡ್ಡಿ, ಸೊಮಣ್ಣ ಹರ್ಲಾಪೂರ ಮುಖ್ಯ ಅತಿಥಿಗಳಾಗಿ ಮಾತನಾಡಿ ಕೇಶಣ್ಣವರ ಅವರ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಹಾಗೂ ಅವರ ಪತ್ನಿಯನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಆರ್.ಆರ್. ಪಾಟೀಲ ನಿರೂಪಿಸಿದರು. ಡಾ. ಡಿ.ಎಲ್. ಪಾಟೀಲ ವಂದಿಸಿದರು. ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಕೇಶಣ್ಣವರ ಅವರ ಬಂಧುಗಳು, ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
“ನಿವೃತ್ತಿಯಿಂದ ಕೇವಲ ಹುದ್ದೆಯ ಜವಾಬ್ದಾರಿ ಮುಗಿಯುತ್ತದೆ. ಸಂಸ್ಥೆ, ಗುರು-ಶಿಷ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ನಿರ್ಮಾಣವಾದ ಆತ್ಮೀಯ ಸಂಬಂಧಗಳು ಎಂದಿಗೂ ಮುಗಿಯುವುದಿಲ್ಲ.”
— ಮುಪ್ಪಿನ ಬಸವಲಿಂಗ ಸ್ವಾಮೀಜಿ



