ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 1996–99ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಗುರು–ಶಿಷ್ಯರ ಭಾವನಾತ್ಮಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಸುಮಾರು ಮೂರು ದಶಕಗಳ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಪಾದಪೂಜೆ ನೆರವೇರಿಸಿ, ಸನ್ಮಾನಿಸಿ ಗೌರವಿಸಿದರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಗುರು–ಶಿಷ್ಯರು ಪರಸ್ಪರ ಭಾವುಕರಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ತು.ಕ. ಶಂಕ್ರಯ್ಯ, ಅಂದಿನ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಹಾಗೂ ಕ್ರಿಯಾಶೀಲತೆಯಿಂದ ಉಪನ್ಯಾಸಕರು ಕೂಡ ಹೆಚ್ಚು ಅಧ್ಯಯನಶೀಲರಾಗುತ್ತಿದ್ದೆವು. ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು ಎಂಬುದು ಸಂತಸದ ಸಂಗತಿ ಎಂದರು.
ವಾಣಿಜ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಪನ್ನಂಗದರ ಮಾತನಾಡಿ, ಹಗರಿಬೊಮ್ಮನಹಳ್ಳಿಯಲ್ಲಿ ಅಂದಿನ ಕಾಲದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಹಾಗೂ ಬೆಳವಣಿಗೆಯಲ್ಲಿ ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸ್ತುತ ಪ್ರಾಂಶುಪಾಲ ಮಂಜುನಾಥ ಉಲವತ್ತಿ ಶೆಟ್ಟರ್ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಎನ್.ವಿ. ಹನುಮಂತಯ್ಯ, ಹುರಕಡ್ಲಿ ಬಸಪ್ಪ, ಬಿ. ಮಾರುತೇಶ್, ಜಿ. ಮಲ್ಲಿಕಾರ್ಜುನ, ಅಪ್ಪೇನಹಳ್ಳಿ ಹೇಮರೆಡ್ಡಿ, ನಿವೃತ್ತ ಗ್ರಂಥಪಾಲಕ ಕೆ. ರಾಮಲಿಂಗಪ್ಪ, ಕಾಲೇಜಿನ ಪ್ರಸ್ತುತ ಸೂಪರಿಂಟೆಂಡೆಂಟ್ ಸುರೇಶ್, ದಿವಂಗತ ಕೃಷ್ಣ ನಾಯಕ್ ಅವರ ಧರ್ಮಪತ್ನಿ ಪುಷ್ಪಾ ಕೃಷ್ಣ ನಾಯಕ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ವಾಣಿಶ್ರೀ ಹಾಗೂ ನಾಗಲಕ್ಷ್ಮಿ ಸ್ವಾಗತಿಸಿದರು. ಎಂ.ಪಿ.ಎಂ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ. ಶಿವಕುಮಾರ್ ವಂದಿಸಿದರು. ಉಪನ್ಯಾಸಕ ಬೆಟ್ಟಪ್ಪ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮುಖಂಡ ಎನ್.ಎಂ. ಗೌಸ್ ಕಾರ್ಯಕ್ರಮದ ಆಯೋಜನೆ ಹಾಗೂ ಅಂದಿನ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನೀಲಪ್ಪ, ಗುಡ್ಡಪ್ಪ, ರೇವಣಸಿದ್ದನಗೌಡ, ಡಿ. ಇಬ್ರಾಹಿಂ, ಡಿ.ಕೆ. ಕೊಟ್ರೇಶ್, ಅಕ್ಕಿ ಮಲ್ಲಿಕಾರ್ಜುನ, ಬಿ. ಶ್ರೀನಿವಾಸ್, ಸಿ.ಎಂ. ಶ್ರೀನಿವಾಸ್, ಮಮತಾ, ವಾಸಂತಿ, ಎಸ್. ಬಾನು, ಎ. ಯಶೋಧ, ಭದ್ರವಾಡಿ ನಾಗವೇಣಿ, ಎಸ್.ಎಂ. ಶೈಲಜಾ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
“30 ವರ್ಷಗಳ ಬಳಿಕ ನಮ್ಮನ್ನೆಲ್ಲ ಕರೆಸಿ ಗುರುಭಕ್ತಿಯನ್ನು ಮೆರೆದಿರುವುದು ನಮ್ಮ ವೃತ್ತಿ ಜೀವನವನ್ನೇ ಸಾರ್ಥಕಗೊಳಿಸಿದೆ. ವಿದ್ಯಾರ್ಥಿಗಳ ಈ ಪ್ರೀತಿ ಮತ್ತು ಗೌರವ ಎಂದಿಗೂ ಮರೆಯಲಾಗದು.”
— ಐ. ಬಸವರಾಜ್, ನಿವೃತ್ತ ಪ್ರಾಚಾರ್ಯ



