ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಆ.24ರಂದು ನಡೆಯಲಿರುವ ಬೆಳ್ಳಿ ರಥೋತ್ಸವಕ್ಕೆ ಧಾರ್ಮಿಕ ಸಂಭ್ರಮದ ಮುನ್ನುಡಿ ಬಿದ್ದಿದೆ. ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಂಗಳವಾರ ಪುರಪ್ರವೇಶ ಮಾಡುವ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಗ್ರಾಮದ ಹೊರವಲಯಕ್ಕೆ ಆಗಮಿಸಿದ ಶ್ರೀಗಳನ್ನು ಗ್ರಾಮಸ್ಥರು ವಿವಿಧ ವಾದ್ಯಮೇಳಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಅಲಂಕೃತ ಚಕ್ಕಡಿಯಲ್ಲಿ ಶ್ರೀಗಳನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅನ್ನದಾನೇಶ್ವರ ಸಂಸ್ಥಾನ ಮಠಕ್ಕೆ ಕರೆತರಲಾಯಿತು. ಶ್ರೀಗಳು ರಥೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು.
‘ಸದಾಚಾರ–ಸದ್ವಿಚಾರವೇ ಬದುಕಿನ ಬೆಳಕು’
ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಮನುಷ್ಯನ ಜೀವನದಲ್ಲಿ ಸದಾಚಾರ ಬಹಳ ಮುಖ್ಯ. ಸದ್ವಿಚಾರಗಳನ್ನು ನಿರಂತರವಾಗಿ ಮೈಗೂಡಿಸಿಕೊಳ್ಳಬೇಕು. ಶಿವಾನುಭವ ಚಿಂತನೆಯಿಂದ ಮನಸ್ಸಿನ ಮೈಲಿಗೆಯನ್ನು ದೂರ ಮಾಡಿಕೊಂಡು ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಭಕ್ತಿಯಿಂದ ಗುರುವಿನಲ್ಲಿ ಪ್ರಾರ್ಥಿಸಿದಾಗ ಮನೋಭಿಲಾಷೆಗಳು ಫಲಿಸುತ್ತವೆ ಎಂದರು.
ಹಾಲಕೆರೆ ಗ್ರಾಮದ ಭಕ್ತರು ಪ್ರತಿವರ್ಷ ತಪ್ಪದೇ ಪುರಪ್ರವೇಶ ಮಾಡಿಸುವ ಮೂಲಕ ಮಠದ ಮೇಲಿನ ಭಕ್ತಿಯನ್ನು ಮೆರೆದಿದ್ದಾರೆ ಎಂದು ಶ್ರೀಗಳು ಹೇಳಿದರು.
ಆ.14ರಿಂದ 11 ದಿನ ಪುರಾಣ ಪ್ರವಚನ
ಅನ್ನದಾನೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಆ.14ರಿಂದ 24ರವರೆಗೆ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9ರವರೆಗೆ ನಾಲತ್ವಡ ಶ್ರೀ ವೀರೇಶ್ವರ ಶರಣರ ಪುರಾಣ ಪ್ರವಚನ ನಡೆಯಲಿದೆ.
ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯವನ್ನು ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ದರುರ ಸಂಗಮೇಶ್ವರ ಮಠದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು ಹಾಗೂ ಬನವಾಸಿಯ ಶ್ರೀ ಶಿವಲಿಂಗೇಶ್ವರ ದೇವರು ಸಮ್ಮುಖ ವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.



