HomeUncategorizedಪಡಿತರಕ್ಕಾಗಿ ಕೆಲಸ ಬಿಟ್ಟು ಕ್ಯೂನಲ್ಲಿ ನಿಲ್ಲಬೇಕು: KYC ತಂತ್ರಾಂಶದ ಎಡವಟ್ಟಿಗೆ ಬಡವರ ಪರದಾಟ

ಪಡಿತರಕ್ಕಾಗಿ ಕೆಲಸ ಬಿಟ್ಟು ಕ್ಯೂನಲ್ಲಿ ನಿಲ್ಲಬೇಕು: KYC ತಂತ್ರಾಂಶದ ಎಡವಟ್ಟಿಗೆ ಬಡವರ ಪರದಾಟ

For Dai;y Updates Join Our whatsapp Group

ಧಾರವಾಡ: ಪಡಿತರ ಚೀಟಿದಾರರ ಅರ್ಹತೆ ಪರಿಶೀಲನೆಗಾಗಿ ಸರ್ಕಾರ ಜಾರಿಗೆ ತಂದಿರುವ ಹೊಸ KYC ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳು ಫಲಾನುಭವಿಗಳ ದಿನನಿತ್ಯದ ಬದುಕನ್ನೇ ಅಸ್ತವ್ಯಸ್ತಗೊಳಿಸಿವೆ. ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್, OTP ಸೇರಿದಂತೆ ಹಲವು ಹಂತಗಳ ಪ್ರಕ್ರಿಯೆ ಪೂರ್ಣಗೊಳಿಸಬೇಕಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ.

ಪಡಿತರ ವಿತರಣೆಯಲ್ಲಿ ಅನರ್ಹರನ್ನು ಪತ್ತೆಹಚ್ಚಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ತಂತ್ರಾಂಶವನ್ನು ಬಲಪಡಿಸಿದೆ. ಆದರೆ ಸರ್ವರ್‌ ಸಾಮರ್ಥ್ಯ ಮತ್ತು ತಾಂತ್ರಿಕ ದೋಷಗಳಿಂದಾಗಿ KYC ಪೂರ್ಣಗೊಳಿಸುವುದೇ ಫಲಾನುಭವಿಗಳಿಗೆ ದೊಡ್ಡ ಸವಾಲಾಗಿದೆ.

ಕುಟುಂಬದ ಪ್ರತಿಯೊಬ್ಬ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಹಾಜರಾಗಿ ಹೆಬ್ಬೆರಳಿನ ಗುರುತು ನೀಡಬೇಕು. ಬಳಿಕ ಮೊಬೈಲ್‌ಗೆ ಬರುವ OTPಯನ್ನು ತಂತ್ರಾಂಶದಲ್ಲಿ ನಮೂದಿಸಬೇಕು. OTP ಬರಲು ವಿಳಂಬವಾದರೆ ಅಥವಾ ನಮೂದಿಸುವ ವೇಳೆಗೆ ಅದರ ಅವಧಿ ಮುಗಿದರೆ ಮತ್ತೆ ಮೊದಲಿನಿಂದಲೇ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ.

ಹೀಗಾಗಿ ಒಂದೇ ಕುಟುಂಬದ KYC ಪೂರ್ಣಗೊಳಿಸಲು ಹಲವು ಗಂಟೆಗಳು ಬೇಕಾಗುತ್ತಿವೆ. ಏಳೆಂಟು ಸದಸ್ಯರಿರುವ ಕುಟುಂಬಗಳ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿದೆ. ಸರ್ವರ್‌ ಸಮಸ್ಯೆಯಿಂದ ಕೆಲವೊಮ್ಮೆ ಇಡೀ ದಿನ ಕಾದರೂ ಇಬ್ಬರು-ಮೂವರು ಸದಸ್ಯರ KYC ಮಾತ್ರ ಪೂರ್ಣಗೊಳ್ಳುತ್ತಿದೆ ಎಂಬ ಆರೋಪ ಫಲಾನುಭವಿಗಳಿಂದ ಕೇಳಿಬರುತ್ತಿದೆ.

ಇದರ ಹೊಡೆತ ನೇರವಾಗಿ ದಿನಗೂಲಿ ಕಾರ್ಮಿಕರ ಮೇಲೆ ಬಿದ್ದಿದೆ. ಕೂಲಿ ಕೆಲಸಕ್ಕೆ ತೆರಳಿದರೆ ಮಾತ್ರ ಆ ದಿನದ ಆದಾಯ ಸಿಗುವ ಕುಟುಂಬಗಳು, ಪಡಿತರ ಪಡೆಯಲು ಕೆಲಸವನ್ನೇ ಬಿಟ್ಟು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಒಂದು ದಿನದ ಕೂಲಿ ತಪ್ಪಿದರೆ ಕುಟುಂಬದ ಆಹಾರಕ್ಕೂ ಸಮಸ್ಯೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ವೃದ್ಧರು ಕೂಡ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಗಿದ್ದು, ಬಿಸಿಲಿನಲ್ಲಿ ಕೆಲವರು ಅಸ್ವಸ್ಥರಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಅಂಗಡಿ ಮಾಲೀಕರು ಹಾಗೂ ಸ್ಥಳೀಯರೇ ನೆರವಿಗೆ ಧಾವಿಸುತ್ತಿದ್ದಾರೆ.

ತಾಂತ್ರಿಕ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸರ್ವರ್‌ ಸಮಸ್ಯೆಯ ಕಾರಣ ನೀಡಲಾಗುತ್ತಿದೆ. ಆದರೆ ಪರಿಹಾರ ಸಿಗದೆ ಜನರ ಸಂಕಷ್ಟ ಮುಂದುವರಿದಿದೆ. ಅರ್ಹ ಫಲಾನುಭವಿಗಳಿಗೆ ಪಡಿತರ ಪಡೆಯುವುದೇ ಕಷ್ಟವಾಗದಂತೆ KYC ವ್ಯವಸ್ಥೆಯನ್ನು ತಕ್ಷಣ ಸರಿಪಡಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಇದೀಗ ಬಲಗೊಂಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img