ವಿಜಯಸಾಕ್ಷಿ ಸುದ್ದಿ, ಗದಗ:
ಕ್ಷುಲ್ಲಕ ಕಾರಣಕ್ಕಾಗಿ ತಂದೆ-ಮಗನ ಮಧ್ಯೆ ಉಂಟಾದ ಜಗಳ ತಂದೆಯ ಕೊಲೆಯಲ್ಲಿ ಅಂತ್ಯಗೊಂಡಿದೆ.
ಗದಗ ತಾಲ್ಲೂಕಿನ ಹಾತಲಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಭರಮಪ್ಪ ದೊಡ್ಡಮನಿ (56) ಎಂಬಾತ ಮಗ ಸುರೇಶನ ಕೈಯಲ್ಲಿ ಕೊಲೆಗೀಡಾಗಿದ್ದಾನೆ.
ಭರಮಪ್ಪ ಹಾಗೂ ಸುರೇಶ್ ನ ಮಧ್ಯೆ ನಿತ್ಯವೂ ಕಲಹ ನಡೆಯುತ್ತಿತ್ತು ಎಂದು ಪೊಲೀಸ ಮೂಲಗಳು ತಿಳಿಸಿವೆ.
ಶನಿವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿದೆ. ಕುಪಿತನಾದ ಸುರೇಶ್ ತಕ್ಷಣವೇ ಮನೆಯಲ್ಲಿದ್ದ ಚಾಕು ತಂದವನೇ ತಂದೆ ಭರಮಪ್ಪನಿಗೆ ಹೊಟ್ಟೆಗೆ, ಎದೆಗೆ ಮನ ಬಂದಂತೆ ಚುಚ್ಚಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಭರಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಂದೆಯ ಸಾವಿನಿಂದಾಗಿ ಹೆದರಿದ ಸುರೇಶ್ ಸದ್ಯಕ್ಕೆ ಪರಾರಿಯಾಗಿದ್ದು, ಸುದ್ದಿ ತಿಳಿದ ಇನ್ಸ್ಪೆಕ್ಟರ್ ರವಿ ಕಪ್ಪತನವರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.