ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಾಡಿನ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕೇವಲ ಹಿಂದಿನ ಪೀಳಿಗೆಯ ನೆನಪುಗಳಾಗಿ ಉಳಿಯದೆ, ಮುಂದಿನ ತಲೆಮಾರಿನ ಬದುಕಿನ ಭಾಗವಾಗಬೇಕು ಎಂಬ ಆಶಯದೊಂದಿಗೆ ಗದಗದಲ್ಲಿ ವಿಶ್ವ ಜಾನಪದ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ‘ಪಂಚಂ… ಪಗಡಂ…’ ಜಾನಪದ ಆಟ-ನೃತ್ಯ ಸಂಭ್ರಮಾಚರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ, ಜಗತ್ತಿನಲ್ಲೇ ವಿಶಿಷ್ಟ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ನಾವು ಇಂದು ಅವುಗಳನ್ನು ಮರೆಯುತ್ತಿರುವುದು ವಿಷಾದನೀಯ. ಸ್ವಾತಂತ್ರ್ಯೋತ್ತರ ಪೀಳಿಗೆ ನಮ್ಮ ಮೂಲ ಕಲೆಗಳತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕಾಗಿತ್ತು. ಆದರೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಒಲವು ತೋರಿದ್ದರಿಂದ ಉತ್ತರ ಕರ್ನಾಟಕದ ಜನಪದ ಕಲೆ ಮತ್ತು ಸಾಹಿತ್ಯ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣಲಿಲ್ಲ ಎಂದರು.
ನಮ್ಮ ಮೂಲ ಕಲೆಗಳನ್ನು ಉತ್ತೇಜಿಸುವ ಕೆಲಸ ಈಗ ಪ್ರಮುಖ ಆದ್ಯತೆಯಾಗಬೇಕು. ಜನಪದ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಎಚ್.ಕೆ. ಪಾಟೀಲ ಹೇಳಿದರು.
ಮುಂಡರಗಿಯ ಸಾಹಿತಿ ಡಾ. ನಿಂಗು ಸೊಲಗಿ ಜಾನಪದ ಆಟಗಳ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಇಂದಿನ ತಲೆಮಾರಿಗೆ ಮೂಲ ಜನಪದ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮರೆಯಾಗುತ್ತಿರುವ ಹಗ್ಗ ಜಗ್ಗಾಟ, ಸರ್ಕಲ್ ಕೋ-ಕೋ, ಕುಂಟೇಬಿಲ್ಲಿ, ಆಣಿಕೀರ, ಚಿಣಿಪಣಿ, ಕೆರೆ ದಡ ಸೇರಿದಂತೆ ವಿವಿಧ ಜಾನಪದ ಆಟಗಳನ್ನು ವಿದ್ಯಾರ್ಥಿಗಳಿಗೆ ಆಡಿಸಲಾಯಿತು. ಅಪರೂಪವಾಗುತ್ತಿರುವ ಗ್ರಾಮೀಣ ಆಟಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹೊಸ ಅನುಭವದೊಂದಿಗೆ ಸಂಭ್ರಮಿಸಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗದಗ ಜಿಲ್ಲಾ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಶಿವಾನಂದ ಕೊರವರ, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ ಕಿಲ್ಲೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಾವಿದರಾದ ಯಲ್ಲಪ್ಪ ಡಕ್ಕಣ್ಣವರ, ಬಸವರಾಜ ಜಕ್ಕಮ್ಮನವರ, ಯಲ್ಲಪ್ಪ ಚಂದಣ್ಣವರ, ಸಂಕಪ್ಪ ಹುಲ್ಲೂರ, ದುರ್ಗಮ್ಮ ಮಾದರ, ಈರಣ್ಣ ಕಬ್ಬಿಣದ ಹಾಗೂ ಪ್ರಕಾಶ ಕುರುಬರ ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ವಿದ್ಯಾರ್ಥಿಗಳ ಕನ್ನಡ ಬಳಗದವರು ನಾಡಗೀತೆ ಹಾಡಿದರು. ಬಸವರಾಜ ಈರಣ್ಣವರ ತಂಡ ಪ್ರಾರ್ಥಿಸಿತು. ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಕಿರೇಸೂರ ವಂದಿಸಿದರು.
ನಮ್ಮ ಮೂಲ ಜನಪದ ಸಂಸ್ಕೃತಿಯ ವೈಭವ ಮಾಯವಾಗುತ್ತಿರುವುದು ಆತಂಕ ಮೂಡಿಸಿದೆ. ಮುಂದಿನ ಪೀಳಿಗೆಗೆ ಜನಪದ ಕಲೆಗಳನ್ನು ಪರಿಚಯಿಸಿ, ಉಳಿಸಿ ಬೆಳೆಸುವ ಕೆಲಸ ಹಿರಿಯ ಕಲಾವಿದರಿಂದ ಆಗಬೇಕು. ಇದಕ್ಕೆ ಅಗತ್ಯ ಸಹಕಾರವೂ ದೊರೆಯಬೇಕು.
— ಎಚ್.ಕೆ. ಪಾಟೀಲ, ಶಾಸಕ



