ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ ಸಾಂಸ್ಕೃತಿಕ ಲೋಕಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಪಾರಂಪರಿಕ ಕಲೆಗಳನ್ನು ತಲೆಮಾರಿನಿಂದ ತಲೆಮಾರಿಗೆ ಪರಿಚಯಿಸಿ, ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕಲಾವಿದರ ಪಾತ್ರ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಎ.ಎಸ್.ಎಸ್. ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಪಂಚಂ… ಪಗಡಂ…’ ಜಾನಪದ ಆಟ-ನೃತ್ಯ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಕಲೆಗಳು ನಮ್ಮ ನೆಲದ ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಇಂತಹ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.
ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಿ ಗಮನ ಸೆಳೆದವು. ಕಲಘಟಗಿಯ ಕುಬೇರಗೌಡ ಮುರಳಿ ಮತ್ತು ತಂಡದ ಕರಡಿ ಮಜಲು, ಉತ್ತರ ಕನ್ನಡ ಜಿಲ್ಲೆಯ ಜುಲಿಯಾ ಫೇದ್ರು ಫರ್ನಾಂಡಿಸ್ ಮತ್ತು ತಂಡದ ಸಿದ್ಧಿ ಡಮಾಮಿ ನೃತ್ಯ, ಹಾವೇರಿಯ ಬಸವಣ್ಣಿಪ್ಪ ಅಟವಳಗಿ ಮತ್ತು ತಂಡದ ಪುರವಂತಿಕೆ, ರಾಯಚೂರು ಜಿಲ್ಲೆಯ ಮಸ್ಕಿ ಅಮರೇಶ ಮತ್ತು ತಂಡದ ಹಗಲು ವೇಷ, ಕೊಪ್ಪಳ ಜಿಲ್ಲೆಯ ನಾಗರಾಜ ಹಿರೇಮಠ ಮತ್ತು ತಂಡದ ನಂದಿಧ್ವಜ ಕುಣಿತ ಹಾಗೂ ಧಾರವಾಡ ಜಿಲ್ಲೆಯ ದ್ಯಾಮಣ್ಣ ಲಮಾಣಿ ಮತ್ತು ತಂಡದ ವೀರಗಾಸೆ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದವು.
ಸ್ಥಳೀಯ ಕಲಾವಿದರಿಂದಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆರವಣಿಗೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಸಾಹಿತಿಗಳಾದ ಡಾ. ರಾಜೇಂದ್ರ ಗಡಾದ, ಡಾ. ನಿಂಗೂ ಸೊಲಗಿ, ಕಲಾವಿದರಾದ ವಿಜಯ ಕಿರೇಸೂರ, ಸೋಮಶೇಖರ ಚಿಕ್ಕಮಠ, ಶಿವು ಭಜಂತ್ರಿ, ಗೌಡಪ್ಪ ಬೊಮ್ಮಪ್ಪನವರ, ಬಸವರಾಜ ಈರಣ್ಣವರ, ನಿಂಗಪ್ಪ ಗುಡ್ಡದ, ಯಲ್ಲಪ್ಪ ಡಕ್ಕಣ್ಣವರ, ಅಜಿತ ಬಸಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜಾನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತಿಬಿಂಬ. ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುವಲ್ಲಿ ಕಲಾವಿದರ ಪಾತ್ರ ಅತ್ಯಂತ ಮಹತ್ವದ್ದು.
— ಪ್ರೊ. ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ



