ವಿಜಯಸಾಕ್ಷಿ ಸುದ್ದಿ, ನವಲಗುಂದ:
ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೃದ್ದೆಯೊಬ್ಬಳಿಗೆ ಗಂಭೀರ ಗಾಯವಾದ ಘಟನೆ ತಾಲ್ಲೂಕಿನ ಗುಡಿಸಾಗರ ಕ್ರಾಸ್ ಬಳಿ ಸೋಮವಾರ ಸಂಜೆ ಸಂಭವಿಸಿದೆ.
ನವಲಗುಂದ ತಾಲ್ಲೂಕಿನ ಯಮನೂರ ಚಾಂಗದೇವನ ದರ್ಶನಕ್ಕೆಂದು ಗದಗ ಜಿಲ್ಲೆಯ ರೋಣದಿಂದ ಆಟೋದಲ್ಲಿ ಬಂದಿದ್ದ ಭಕ್ತರು ಚಾಂಗದೇವನ ದರ್ಶನ ಪಡೆದು ಮರಳಿ ಹೋಗುವ ಸಂದರ್ಭದಲ್ಲಿ ಸಂಜೆ ಈ ದುರ್ಘಟನೆ ಸಂಭವಿಸಿದೆ.
ಚಾಲಕ ಮೌಲಾಸಾಬ ರಂಜಾನ್ಸಾಬ ಮುಲ್ಲಾನವರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೃದ್ದೆ ಬೀಬಿಜಾನ ರಂಜಾನ್ಸಾಬ ಮುಲ್ಲಾನವರ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.