ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಒಗ್ಗಟ್ಟು ಮತ್ತು ಸಹಕಾರದಿಂದ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯ ಎಂದು ಗಣ್ಯ ಉದ್ಯಮಿ ವಿಜಯಕುಮಾರ ಗಡ್ಡಿ ಹೇಳಿದರು.
ಬೆಟಗೇರಿಯ ಹುಯಿಲಗೋಳ ರಸ್ತೆಯ ಗೌರಿಗುಡಿ ಓಣಿಯಲ್ಲಿರುವ ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯ ಗೌರಿಗುಡಿಯ ಜೀರ್ಣೋದ್ಧಾರ ಕಾಮಗಾರಿಯ ಸ್ಲ್ಯಾಬ್ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಟಗೇರಿಯ ವೀರಶೈವ ಸಮಾಜವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಿರಿಯರು, ಯುವಕರು ಹಾಗೂ ಸಮಾಜಸೇವಕರನ್ನು ಒಳಗೊಂಡಿದೆ. ರೈತರು, ವ್ಯಾಪಾರಸ್ಥರು, ಉದ್ಯಮಿಗಳು, ಎಪಿಎಂಸಿ ವಹಿವಾಟುದಾರರು, ಶಿಕ್ಷಕರು, ಪತ್ರಕರ್ತರು, ಸರ್ಕಾರಿ ನೌಕರರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಸಮಾಜದವರು ಹೆಸರು ಮಾಡಿದ್ದು, ಸಮಾಜಸೇವೆಯಲ್ಲಿಯೂ ಜನಮನ್ನಣೆ ಗಳಿಸಿದ್ದಾರೆ ಎಂದು ಹೇಳಿದರು.
ಈ ಭಾಗದ ಮಹತ್ವದ ಧಾರ್ಮಿಕ ಕೇಂದ್ರವಾಗಿರುವ ಗೌರಿಗುಡಿಯನ್ನು ಅದರ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಕೈಗೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿದರೆ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ಯಶಸ್ವಿಯಾಗಿ ಕೈಗೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಉದ್ಯಮಿಗಳಾದ ವಿಜಯಕುಮಾರ ಗಡ್ಡಿ, ರವಿ ಪಟ್ಟಣಶೆಟ್ಟಿ ಹಾಗೂ ಮೋಹನ ಮಾಳಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಪುತ್ರಪ್ಪ ಬೆಂತೂರ, ಬಸವಣ್ಣೆಪ್ಪ ಮಾಳಶೆಟ್ಟಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಶಿವಪ್ಪ ನಾಗರಾಳ, ಪ್ರಕಾಶ ಮ್ಯಾಗೇರಿ, ಶರಣಪ್ಪ ಅಣ್ಣಿಗೇರಿ, ಶಿವಯ್ಯ ಶಿವಪ್ಪಯ್ಯನಮಠ, ಸಿದ್ದು ಮುಳ್ಳಾಳ, ಬಸವರಾಜ ಕುಂದಗೋಳ, ಸುದೀಪ ಕಣವಿ, ರಾಜು ಗೊಂಡಬಾಳ, ಸುರೇಶ ಬೆಂತೂರ, ಮಹೇಶ ಚಿಕ್ಕನಗೌಡ್ರ, ಶ್ರೀಕಾಂತ ಸೋನೆ, ಶ್ರೀನಿವಾಸ ಬೆಟಗೇರಿ, ಮಂಜುನಾಥ ಬೆಂತೂರ ಹಾಗೂ ಶರಣಪ್ಪ ಆಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಬಹುದೊಡ್ಡ ಶಕ್ತಿಯಾಗಿದೆ. ಎಲ್ಲರೂ ಒಂದಾಗಿ ಕೈಜೋಡಿಸಿದರೆ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಇನ್ನಷ್ಟು ಪರಿಣಾಮಕಾರಿಯಾಗಿ ಸಾಧ್ಯವಾಗುತ್ತದೆ.
ವಿಜಯಕುಮಾರ ಗಡ್ಡಿ



