ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಅರಿಯುವ ವಿವೇಕ ಬೆಳೆಸಿಕೊಳ್ಳಬೇಕು ಎಂದು ಚಿಂತಕ ಶಂಭುಲಿಂಗಯ್ಯ ಕಲ್ಮಠ ಹೇಳಿದರು.
ಗದುಗಿನ ಸರ್ಕಾರಿ ಪ್ರಾಥಮಿಕ ಶಾಲೆ ನಂ.6 ಹಾಗೂ ಉರ್ದು ಪ್ರಾಥಮಿಕ ಶಾಲೆ ನಂ.3ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಹಮ್ಮಿಕೊಂಡಿದ್ದ ‘ಅಮೃತಭೋಜನ-ಜ್ಞಾನಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಯುತ ಬದುಕಿನ ದಾರಿ ತೋರಿಸುವುದು ದೊಡ್ಡ ಆಸ್ತಿಯಾಗಿದ್ದು, ಹಿರಿಯರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿ ಚಂಪಾ ಪಾಟೀಲ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ, ಮಾನವೀಯತೆ, ಸಹಕಾರ ಹಾಗೂ ದೇಶಪ್ರೇಮವನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು. ಸುಮತಿ ಗದಗಿನಮಠ ಅವರು ಶರಣರ ವಚನಗಳನ್ನು ಓದಿ ಅವುಗಳ ತತ್ವದಂತೆ ಬದುಕಬೇಕು ಎಂದರು.
ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಎಂ.ಎ. ಕಂದಗಲ್ಲ ಸ್ವಾಗತಿಸಿದರು. ಎಸ್.ಎಸ್. ಕುಷ್ಟಗಿ ನಿರೂಪಿಸಿದರು. ಎ.ಎಸ್. ಮಸೂತಿ ವಂದಿಸಿದರು.
ಅಕ್ಷತಾ ವಿಲ್ಲಾಯತ್, ಎಂ.ಐ. ಜಮಾಲಸಾಬನವರ, ಬಿ. ಹೂಗಾರ, ಸಾವಿತ್ರಿ ಬಳ್ಳಾರಿ, ಮಹೇಶ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.



